ಉಡುಪಿ, ಜೂ 8 (DaijiworldNews/MS): ಉದ್ಯಮಿ ಭಾಸ್ಕರ್ ಶೆಟ್ಟಿ(52)ಯನ್ನು ಕೊಲೆ ನಡೆಸಿ ಹೋಮಕುಂಡದಲ್ಲಿ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶ ಸುಬ್ರಹ್ಮಣ್ಯ ಜೆ.ಎನ್ ಜೂ.8 ರಂದು ತೀರ್ಪು ಪ್ರಕಟಿಸಿದ್ದು ಮೂವರು ಪ್ರಮುಖ ಆರೋಪಿಗಳು 'ದೋಷಿಗಳ ಎಂದಿದ್ದು ಅವರಿಗೆ ಜೀವಿತಾವಧಿ ಶಿಕ್ಷೆ ವಿಧಿಸಿ ' ತೀರ್ಪು ಪ್ರಕಟಿಸಿದ್ದಾರೆ.
ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ, ನಿರಂಜನ್ ಭಟ್, ನವನೀತ್ ಶೆಟ್ಟಿ
ಉದ್ಯಮಿ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ, ರಾಜೇಶ್ವರಿ ಸ್ನೇಹಿತ ನಿರಂಜನ್ ಭಟ್ ಮೂವರು ದೋಷಿಗಳೆಂದು ಶಿಕ್ಷೆ ವಿಧಿಸಿದೆ.
ನಾಲ್ಕನೇ ಆರೋಪಿಯಾಗಿರುವ ನಿರಂಜನ್ ಭಟ್ ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು, ಐದನೇ ಆರೋಪಿ ಸಾಕ್ಷ್ಯನಾಶ ಆರೋಪವುಳ್ಳ ರಾಘವೇಂದ್ರನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಆರೋಪಿಗಳ ಶಿಕ್ಷೆ ಪ್ರಮಾಣವನ್ನು ಇಂದು ಮಧ್ಯಾಹ್ನ ನ್ಯಾಯಾಲಯದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ಪ್ರಕಟಿಸಲಿದ್ದಾರೆ.
ಪ್ರಕರಣದ ಹಿನ್ನೆಲೆ: ಈ ಘಟನೆ ನಡೆದು 5 ವರ್ಷಗಳಾಗಿದ್ದು 2016ರ ಜು.28ರಂದು ಅಪರಾಹ್ನ 3 ಗಂಟೆಗೆ ಇಂದ್ರಾಳಿಯ ಮನೆಯಲ್ಲಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಿ,ಬಳಿಕ ಮೃತದೇಹವನ್ನು ನಂದಳಿಕೆಯಲ್ಲಿರುವ ನಿರಂಜನ ಭಟ್ ಮನೆಯಲ್ಲಿನ ಹೋಮ ಕುಂಡದಲ್ಲಿ ಹಾಕಿ ಸುಟ್ಟು ಹಾಕಿದ್ದರು. ಜು. 31 ರಂದು ಮಗ ನಾಪತ್ತೆಯಾಗಿರುವುದಾಗಿ ಭಾಸ್ಕರ್ ಶೆಟ್ಟಿ ಅವರ ತಾಯಿ ಮಣಿಪಾಲ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಘಟನೆ ನಡೆದು 8 ದಿನಗಳ ಬಳಿಕ ಪತ್ನಿ ಹಾಗೂ ಮಗನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸಿದಾಗ ಸತ್ಯಾಂಶ ಹೊರಬಂದಿತ್ತು. ಈ ಘಟನೆ ಕರಾವಳಿಗರನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು.