ಕುಂದಾಪುರ, ಜೂ 07 (DaijiworldNews/MS): ಯಡಮೊಗೆ ಉದಯ ಗಾಣಿಗ ಪ್ರಕರಣ ನಿಷ್ಪಕ್ಷಪಾತ ತನಿಖೆ ನಡೆಯುತ್ತದೆ. ಕಾನೂನಿನ ವಿಚಾರದಲ್ಲಿ ಸರ್ಕಾರವಾಗಲಿ, ಶಾಸಕರಾಗಲಿ, ಸಂಸದರಾಗಲಿ ನಾವ್ಯಾರು ಮಧ್ಯ ಪ್ರವೇಶ ಮಾಡಿಲ್ಲ, ಮಾಡುವುದೂ ಇಲ್ಲ. ಕಾನೂನು ತನ್ನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಚಿತ್ತೂರಿನಲ್ಲಿ ಅವರು ಮಾಧ್ಯಮದವರು ಕೇಳಲಾದ ಉದಯ ಗಾಣಿಗ ಕೊಲೆಯ ಕುರಿತಾದ ಪ್ರಶ್ನೆಗೆ ಉತ್ತರಿಸಿದರು.
ಮುಖ್ಯಮಂತ್ರಿ ಬದಲಾವಣೆ ಗೊಂದಲವಿಲ್ಲ:
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವೇ ಇಲ್ಲ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷದ ಮುಖಂಡರೇ ಈಗಾಗಲೇ ಸ್ಪಷ್ಟ ಪಡಿಸಿದ್ದಾರೆ. ಬಿಜೆಪಿ ರಾಜ್ಯಧ್ಯಕ್ಷರಾದ ಪರಮೋಚ್ಛ ಹುದ್ದೆಯಲ್ಲಿರುವಲ್ಲಿ ನಳಿನ್ ಕುಮಾರ್ ಕಟೀಲು ಅವರೇ ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದಾರೆ. ನಾವೆಲ್ಲ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಯಡಿಯೂರಪ್ಪನವರ ಸರ್ಕಾರದ ಗುರಿ ಎಂದರೆ ಕೊರೋನಾ ಮುಕ್ತ ಕರ್ನಾಟಕವನ್ನು ಮಾಡುವುದು. ಆ ಹಿನ್ನೆಲೆಯಲ್ಲಿ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು-ಶಾಸಕ ಸುಕುಮಾರ ಶೆಟ್ಟಿ
ಯಡಮೊಗೆ ಗ್ರಾಮಪಂಚಾಯತ್ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಕೊಲೆಯಾದ ಉದಯ ಗಾಣಿಗ ಮತ್ತು ಅವರ ಬಳಗದಿಂದ ಬಹಳಷ್ಟು ಕೆಲಸವಾಗಿದೆ. ನಿಷ್ಪಕ್ಷಪಾತವಾದ ತನಿಖೆಯಾಗಬೇಕು. ಇಲ್ಲಿ ಪಕ್ಷದ ವಿಚಾರ ಬರುದಿಲ್ಲ, ಅಪರಾಧಿಗಳನ್ನು ಬಂಧಿಸಿ ಸರಿಯಾದ ಶಿಕ್ಷೆಯಾಗಬೇಕು ಎಂದರು.