ಮಂಗಳೂರು,ಜೂ 07 (DaijiworldNews/MS): ಹಿರಿಯ ಪತ್ರಕರ್ತ, ರಂಗಭೂಮಿ ಕಲಾವಿದ ನವೀನ್ ಚಂದ್ರ ಪಾಲ್ (93) ಜೂ. 5ರಂದು ಶನಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಪತ್ರಿಕೋದ್ಯಮ ಡಿಪ್ಲೊಮಾದ ಸಾಧನೆಗಾಗಿ ಚಿನ್ನದ ಪದಕವನ್ನು ಪಡೆದಿದ್ದ ಇವರು ಸಮಾಜವಾದಿ ಚಿಂತನೆಯ ಪ್ರತಿಪಾದಕರಾಗಿದ್ದರು. ಇವರು 1948 ರಲ್ಲಿ ಸಂಗಾತಿ ಪಾಕ್ಷಿಕ ಪತ್ರಿಕೆಯನ್ನು ಪ್ರಾರಂಭಿಸಿ ಬಳಿಕ 1950 ರಲ್ಲಿ ವಾರಪತ್ರಿಕೆಯಾಗಿ ಮಾರ್ಪಾಡಿಸಿದ್ದರು. ಅರುಣೋದಯ ಪತ್ರಿಕೆಯ ಸಂಪಾದಕರಾಗಿದ್ದ ಇವರು ಮುಂಬಯಿಯಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ದೈನಿಕದ ಸಂಪರ್ಕಾಧಿಕಾರಿ, ಸೀನಿಯರ್ ಎಕ್ಸಿಕ್ಯೂಟಿವ್, ಎನ್ಲೈಟ್ ವಾರಪತ್ರಿಕೆಯಲ್ಲಿ ಅಸಿಸ್ಟೆಂಟ್ ಎಡಿಟರ್, ಕಾಮರ್ಸ್ ವಾರಪತ್ರಿಕೆಯ ಅಸಿಸ್ಟೆಂಟ್ ಎಡಿಟರ್ ಆಗಿ ಸೇವೆ ಸಲ್ಲಿಸಿದ್ದರು.
ಕಾಲೇಜು ವಿದ್ಯಾರ್ಥಿಯಾಗಿದ್ದಾಗ ವಿದ್ಯಾರ್ಥಿ ನಾಯಕರೂ ಆಗಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಇವರು ಕಾಪು ಕ್ಷೇತ್ರದಿಂದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ 1957 ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ಸ್ವಾತಂತ್ರ್ಯ ಯೋಧ ಸಮಾಜವಾದಿ ಅಮ್ಮೆಂಬಳ ಬಾಳಪ್ಪರ ನಿಕಟವರ್ತಿಯಾಗಿದ್ದ ಇವರು ಸಾಮಾಜಿಕ, ಶೈಕ್ಷಣಿಕವಾಗಿ ತೊಡಗಿಸಿಕೊಂಡಿದ್ದರು.
ಇವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿದ್ದು, ಯುವ ವಾಹಿನಿ ಕೇಂದ್ರ ಸಮಿತಿಯಿಂದ ವಿಶು ಕುಮಾರ್ ಪ್ರಶಸ್ತಿ 2013ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನಮತ್ತು ಚಾರಿಟೇಬಕ್ ಟ್ರಸ್ಟ್ ಬಿಜೈ ಇವರು
ಆತ್ಮಶಕ್ತಿ ದಶಮ ಸಂಭ್ರಮದ ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಡಾ. ನಾ ಮೊಗಸಾಲೆ ಗೌರವ ಸಂಪಾದಕತ್ವದಲ್ಲಿ ಡಾ. ಬಿ. ಜನಾರ್ಧನ ಭಟ್ ಸಂಪದಕತ್ವದಲ್ಲಿ ಶ್ರೀ ರಾಮ ದಿವಾಣರು ಸಮಾಜವಾದಿ ಪತ್ರಕರ್ತ ಸಂಗಾತಿ ಮ.ನವೀನ್ ಚಂದ್ರ ಪಾಲ್ ಅವರ ವ್ಯಕ್ತಿ ಪರಿಚಯವನ್ನು ಪ್ರಕಟಿಸಿದ್ದರು