ಕಾಸರಗೋಡು, ಜೂ. 06(DaijiworldNews/SM): ನಾಮಪತ್ರ ಹಿಂದಕ್ಕೆ ಪಡೆಯಲು ಬಿಜೆಪಿಯವರು ಹಣ ನೀಡಿದ್ದರು ಹಾಗೂ ಇನ್ನಿತರ ಆಮಿಷ ನೀಡಿದ್ದರು ಎಂಬ ಮಾಹಿತಿ ಹೊರ ಬಂದ ಹಿನ್ನಲೆಯಲ್ಲಿ ಕಾಸರಗೋಡು ಪೊಲೀಸರು ಮೊಕದ್ದಮೆ ದಾಖಲಿಸಿ ಪ್ರಾಥಮಿಕ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಮಂಜೇಶ್ವರ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರ ರವರ ಮೇಲೆ ಒತ್ತಡ ಹೇರಿ ನಾಮಪತ್ರ ಹಿಂತೆಗೆದುಕೊಂಡಿರುವ ಬಗ್ಗೆ ಸ್ಪೋಟಕ ಮಾಹಿತಿ ಹೊರಬೀಳುತ್ತಲೇ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಮಾಹಿತಿ ಹೊರ ಹಾಕಿದ್ದ ಕೆ. ಸುಂದರ ರವರನ್ನು ಬದಿಯಡ್ಕ ಪೊಲೀಸರು ಠಾಣೆಗೆ ಕರೆಸಿ ಮಾಹಿತಿ ಕಲೆ ಹಾಕಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ನಾಮಪತ್ರ ಹಿಂಪಡೆಯಲು ಬಿಜೆಪಿ ಮುಖಂಡರು ಹಣ ನೀಡಿದ್ದರು ಎಂಬ ಬಗ್ಗೆ ಬಿಎಸ್ಪಿ ಅಭ್ಯರ್ಥಿ ಹೇಳಿಕೆ ಬಳಿಕ ಇದೀಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಈ ನಡುವೆ ಬಿಜೆಪಿಯಿಂದ ಜೀವ ಬೆದರಿಕೆ ಇದೆ ಎಂಬ ಸುಂದರರವರ ದೂರಿನ ಹಿನ್ನಲೆಯಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಮಂಜೇಶ್ವರ ಎಲ್ ಡಿ ಎಫ್ ಅಭ್ಯರ್ಥಿಯಾಗಿದ್ದ ವಿ. ವಿ. ರಮೇಶನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ನೀಡಿದ ದೂರಿನಂತೆ ತನಿಖೆ ಆರಂಭಿಸಿದ್ದು, ಬದಿಯಡ್ಕ ಠಾಣಾ ಪೊಲೀಸರು ಸುಂದರನ್ ರಿಂದ ಮಾಹಿತಿ ಕಲೆ ಹಾಕಿದ್ದಾರೆ.
ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸುಂದರರವರ ಹೇಳಿಕೆಯಿಂದ ಸ್ಪಷ್ಟಗೊಂಡಿದ್ದು, ಸುರೇಂದ್ರನ್ ರ ಆಪ್ತರೆನ್ನಲಾದ ಸುನಿಲ್ ನಾಯ್ಕ್ ನೇತೃತ್ವದಲ್ಲಿ ಬಿಜೆಪಿಯ ತಂಡವು ಸುಂದರರವರ ಮನೆಗೆ ಭೇಟಿ ನೀಡಿರುವ ಬಗ್ಗೆ ಸುಂದರ ರವರು ತನಿಖಾ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಹಣ ನೀಡಿರುವ ಬಗ್ಗೆ ಸುಳಿವು ಲಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೆ.ಸುಂದರರವರ ಹೇಳಿಕೆ ಹಿನ್ನಲೆಯಲ್ಲಿ ಕೆ.ಸುರೇಂದ್ರನ್ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಕಾಸರಗೋಡು ಜಿಲ್ಲಾ ನ್ಯಾಯಾಲಯದ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ಅನುಮತಿ ಲಭಿಸಿದ ಬಳಿಕ ಸುರೇಂದ್ರನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಿದೆ. ಮಂಜೇಶ್ವರದ ಬಿಜೆಪಿ ಮುಖಂಡ ರಿಂದಲೂ ಪೊಲೀಸರು ಮಾಹಿತಿ ಕಲೆ ಹಾಕಲಿದ್ದಾರೆ.