ಉಡುಪಿ, ಜೂ.06 (DaijiworldNews/HR): ಉಡುಪಿಯ ಬ್ರಹ್ಮಗಿರಿ ಸರ್ಕಲ್ನಲ್ಲಿ ಒಂದು ಪುಟ್ಟ ಮೀನು ಅಂಗಡಿಯಿಟ್ಡು ಜೀವನ ಸಾಗಿಸುತ್ತಿದ್ದ ದಲಿತ ಮಹಿಳೆಯರಿಗೆ ಅಂಗಡಿ ಇಟ್ಟು ವ್ಯಾಪರ ನಡೆಸಲು ಬಿಡುತ್ತಿಲ್ಲ ಎಂದು ಆರೋಪ ವ್ಯಕ್ತವಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ವೀಡಿಯೋದಲ್ಲಿ ಮೀನು ಅಂಗಡಿಯ ಮಾಲಕಿ ತಮ್ಮ ಅಂಗಡಿ ತೆರವುಗೊಳಿಸುವಂತೆ ಹೆಲ್ತ್ ಇನ್ಸ್ಪೆಕ್ಟರ್ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸುಷ್ಮಾ ರಾಜ್ ಎಂಬ ಯುವತಿಯು ಈ ಮಹಿಳೆಯರ ಪರವಾಗಿ ಇನ್ಸ್ಟಾಗ್ರಾಮ್'ನಲ್ಲಿ ವೀಡಿಯೋ ಮಾಡಿ ನ್ಯಾಯಾಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಮೂವರು ಮಹಿಳೆಯರು ಸೇರಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಅಂಗಡಿ ಮಾಡಿ ಬದುಕು ಕಟ್ಟಲು ಪ್ರಯತ್ನಿಸಿದ್ದು ಇದೀಗ ತೆರವು ಮಾಡಲು ಯತ್ನಿಸುತ್ತಿರುವುದು ವಿವಾದ ಸೃಷ್ಟಿಸಿದೆ.
ದಲಿತರೆಂಬ ಕಾರಣಕ್ಕೆ ಅಂಗಡಿ ತೆರವುಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆಯೆಂದು ಅಂಗಡಿಯ ಮಾಲಕಿಯರಾದ ರಾಧಾ, ಪ್ರಮೋದ ಮತ್ತು ಹೇಮಲತಾ ಎಂಬವರು ಆರೋಪ ಮಾಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಈ ಮಹಿಳೆಯರು ಇಲ್ಲಿ ವ್ಯಾಪಾರ ಮಾಡುತಿದ್ದು, ನಗರಸಭೆಯ ಅನುಮತಿಯನ್ನು ಕೂಡಾ ಪಡೆದಿದ್ದೇವೆ, ಆದರೆ ನಗರಸಭೆಯ ಆರೋಗ್ಯಾಧಿಕಾರಿಗಳಾದ ಕರುಣಾಕರ್ ಎಂಬವರು ಪದೇ ಪದೇ ಅಂಗಡಿಗೆ ಬಂದು ವಿನಾ ಕಾರಣ ವ್ಯಾಪಾರಕ್ಕೆ ಅಡ್ಡಿಪಡಿಸುತಿದ್ದಾರೆ. ನಿಮ್ಮ ವಿರುದ್ದ ದೂರು ಬಂದಿದೆ, ನೀವು ಇಲ್ಲಿ ಮೀನಿನ ವ್ಯಾಪಾರ ಮಾಡಬಾರದು ಎಂದು ಕಿರುಕುಳ ನೀಡುತಿದ್ದಾರೆ ಎಂದು ಆರೋಪಿಸಿದ್ದಾರೆ.
ಶನಿವಾರ ಸ್ಥಳಕ್ಕೆ ಆಗಮಿಸಿದ ನಗರಸಭೆ ಆರೋಗ್ಯಾಧಿಕಾರಿಗಳು ಅಂಗಡಿಯನ್ನು ಧ್ವಂಸಗೊಳಿಸಲು ಜೆಸಿಬಿ ಯನ್ನು ಕೂಡಾ ಕರೆಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ನಗರಸಭೆ ಆರೋಗ್ಯಾಧಿಕಾರಿಗಳು ಘಟನೆಯ ಕುರಿತಾಗಿ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ
ಈ ಕುರಿತಾಗಿ ಮಹಿಳೆಯರು ಉಡುಪಿ ನಗರ ಪೋಲಿಸ್ ಠಾಣೆಯಲ್ಲಿ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದಾರೆ. ಉಡುಪಿ ನಗರಸಭೆಯ ಆರೋಗ್ಯಧಿಕಾರಿಗಳಾದ ಕರುಣಾಕ್ ಅವರು ಕೂಡಾ ಮಹಿಳೆಯರ ವಿರುದ್ದ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.