ಬಂಟ್ವಾಳ, ಜೂ.5 (DaijiworldNews/HR): ಕೊರೊನಾ ಲಸಿಕೆಯ ಟೋಕನ್ ಪಡೆಯಲು ತಾಲೂಕಿನ ಪುದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ಸರತಿಯಲ್ಲಿ ನಿಂತ ನೂರಾರು ಜನರು ತಡವಾಗಿ ಬಂದ ವೈದ್ಯಾಧಿಕಾರಿ ಮತ್ತು ಕೇಂದ್ರದ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಕೂಡಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪುದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 100 ಕೊರೊನಾ ಲಸಿಕೆ ಬರಲಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಟೋಕನ್ ಪಡೆಯಲು ಶನಿವಾರ ಬೆಳಗ್ಗೆ 6 ಗಂಟೆಯಿಂದಲೇ ಜನರು ಆರೋಗ್ಯ ಕೇಂದ್ರದ ಎದುರು ಸರದಿ ಸಾಲಿನಲ್ಲಿ ನಿಂತಿದ್ದರು. 8 ಗಂಟೆಗೆ ಟೋಕನ್ ನೀಡಲಾಗುವುದು ಎಂದು ಹೇಳಲಾಗಿತ್ತಾದರೂ 8:45 ಗಂಟೆ ವರೆಗೆ ಆರೋಗ್ಯ ಕೇಂದ್ರದ ಬಾಗಿಲು ತೆರೆದಿರಲಿಲ್ಲ.
100 ಲಸಿಕೆಗೆ 300ರಷ್ಟು ಜನರು ಆರೋಗ್ಯ ಕೇಂದ್ರದ ಎದುರು ಸೇರಿದ್ದರು. ಬೆಳಗ್ಗೆಯಿಂದ ಸುರಿಯುತ್ತಿದ್ದ ಮಳೆಗೆ ಒದ್ದೆಯಾಗಿಯೇ ಜನರು ಕ್ಯೂನಲ್ಲಿ ನಿಂತಿದ್ದ ದೃಶ್ಯ ಕಂಡುಬಂತು. ಇದರಿಂದ ಅಸಮಾಧಾನಗೊಂಡ ಜನರು ಟೋಕನ್ ನೀಡಲು ತಡವಾಗಿ ಬಂದ ಕೇಂದ್ರದ ಆರೋಗ್ಯಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು, ವೈದ್ಯಾಧಿಕಾರಿಗೆ ಕರೆ ಮಾಡಿ ತರಾಟೆಗೆ ತೆಗದುಕೊಂಡರು. ಆರೋಗ್ಯ ಕೇಂದ್ರದ ಯಾರಾದರೂ ಒಬ್ಬ ಸಿಬ್ಬಂದಿ ಕನಿಷ್ಠ 8 ಗಂಟೆಗಾದರೂ ಬಂದು ಟೋಕನ್ ನೀಡಿದರೆ ಜನರು ಗಂಟೆಗಳ ಕಾಲ ಸಾಲು ನಿಂತು ಟೋಕನ್ ಸಿಗದೆ ವಾಪಸ್ ಹೋಗುವುದನ್ನು ತಪ್ಪಿಸಬಹುದು ಎಂದು ರಮ್ಲಾನ್ ಮಾರಿಪಳ್ಳ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಲಸಿಕೆ ಬರುವ ದಿನವನ್ನು ಗ್ರಾಮ ಪಂಚಾಯತ್ ಟಾಸ್ಕ್ ಫೋರ್ಸ್ ಸಮಿತಿಗೆ ತಿಳಿಸಿದರೆ ಜನರಿಗೆ ಸುರಕ್ಷಿತ ಅಂತರ ಕಾಪಾಡಲು ಅನುಕೂಲ ಆಗುವ ವ್ಯವಸ್ಥೆಯನ್ನು ಪಂಚಾಯತ್ ನಿಂದ ಮಾಡಬಹುದು. ಮಳೆಯಲ್ಲಿ ಸಾಲು ನಿಂತು ಆಗುವ ಎಲ್ಲಾ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆ ಎಂದರು.
ಪುದು, ತುಂಬೆ, ಮೇರಮಜಲು, ಕೊಡ್ಮಾಣ್, ಕಳ್ಳಿಗೆ ಈ ಐದು ಗ್ರಾಮದ ಜನರಿಗೆ ಪುದು ಗ್ರಾಮದ ಮಾರಿಪಳ್ಳದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಒಂದರಲ್ಲೇ ಲಸಿಕೆ ನೀಡಲಾಗುತ್ತಿದೆ. ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಆಯಾಯ ಗ್ರಾಮದ ಜನರಿಗೆ ಆಯಾಯ ಗ್ರಾಮದಲ್ಲೇ ಲಸಿಕೆ ನೀಡಬೇಕು ಎಂದು ಪುದು ಗ್ರಾಮ ಪಂಚಾಯತ್ ನಿಂದ ನಿರ್ಣಯ ಮಾಡಿ ಕಳುಹಿಸಲಾಗಿದೆ. ಅಲ್ಲದೆ ಶಾಸಕ ಯು.ಟಿ.ಖಾದರ್ ಅವರಿಗೆ ಮನವಿ ಮಾಡಲಾಗಿದೆ. . ಆದಷ್ಟು ಬೇಗ ಆಯಾಯ ಗ್ರಾಮದಲ್ಲಿ ಲಸಿಕೆ ನೀಡುವ ಕಾರ್ಯವನ್ನು ಅಧಿಕಾರಿಗಳು ಆರಂಭಿಸಬೇಕು ಎಂದು ಅವರು ಸೂಚಿಸಿದರು.
ತಾಸುಗಳ ಕಾಲ ಸಾಲು ನಿಂತು ಟೋಕನ್ ಸಿಗದೆ ಸಿಟ್ಟುಗೊಂಡ ಕೆಲವರನ್ನು ಗ್ರಾ. ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಸಮಾಧಾನ ಪಡಿಸಿದರು. ಈ ಸಂದರ್ಭದಲ್ಲಿ ತುಂಬೆ ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ಸಾಲ್ಯಾನ್ ಇದ್ದರು.