ಮಂಗಳೂರು, ಜೂ.5(DaijiworldNews/HR): ದೈವದತ್ತವಾದ ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಬಿಟ್ಟು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಮಂಗಳೂರಿನ ಕದ್ರಿ ಆಶ್ರಮ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಮಂಗಳೂರು ಮಹಾನಗರಪಾಲಿಕೆ, ನೆಹರು ಯುವ ಕೇಂದ್ರ, ಮಂಗಳೂರು ಗ್ರೀನ್ ಬ್ರಿಗೇಡ್ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದ ಅವರು, "ಅರಣ್ಯ ಮತ್ತು ಪರಿಸರವನ್ನು ಉಳಿಸುವುದಲ್ಲದೆ ಅಭಿವೃದ್ಧಿಯ ಹೆಸರಲ್ಲಿ ನಾಶವಾಗುತ್ತಿರುವ ಅರಣ್ಯಕ್ಕೆ ಬದಲಿಯಾಗಿ ಅರಣ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೂಡ ನಡೆಯಬೇಕು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಯುವಂತಾಗಬೇಕು" ಎಂದರು.
ಪರಿಸರ ಸಂರಕ್ಷಣೆ ಗಿಡ ನೆಟ್ಟು ಬೆಳೆಸುವಂತಹ ಕೆಲಸಗಳಿಂದ ನಡೆಯಬೇಕು ಎಂದು ಕಾರ್ಯಕ್ರಮದ ಮುಖ್ಯ ಅತಿಥಿ ಸಂತ ಅಲೋಸಿಯೇಸ್ ಕಾಲೇಜಿನ ಪ್ರಾಚಾರ್ಯ ಪ್ರವೀಣ್ ಮಾರ್ಟಿಸ್ ನುಡಿದರು.
ಪರಿಸರ ದಿನಾಚರಣೆ ದಿನದಂದು ಮಾತ್ರವಲ್ಲದೆ ಸೂಕ್ತವಾದ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಗಿಡಗಳನ್ನು ನೆಡುವ ಅಭ್ಯಾಸ ಮಾಡಿಕೊಳ್ಳುವುದರಿಂದ ಜೀವಸಂಕುಲಕ್ಕೆ ಆಕ್ಸಿಜನ್ ನೀಡುವ ಪರಿಸರವನ್ನು ಚೆನ್ನಾಗಿ ಸರಂಕ್ಷಿಸಲು ಸಾಧ್ಯ ಎಂದು ಮಂಗಳೂರು ಮಹಾನಗರಪಾಲಿಕೆ ಜಂಟಿ ಆಯುಕ್ತರಾದ ಸಂತೋಷ್ ಕುಮಾರ್ ಹೇಳಿದರು.
ನೆಹರೂ ಯುವ ಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಸೂಟಪ್ ಪೇಟೆ ನೇತೃತ್ವದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಂತ ಅಲೋಸಿಯೇಸ್ ಕಾಲೇಜಿನ ರಿಜಿಸ್ಟ್ರಾರ್ ಡಾ.ಆಲ್ವಿನ್ ಡೇಸ. ಪರಿಸರ ಕಾರ್ಯಕರ್ತ ಜೀತ್ ಮಿಲನ್ ರೋಚ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಸುನೀತಾ, ಕದ್ರಿ ಆಶ್ರಮ ಶಾಲೆ ಮೇಲ್ವಿಚಾರಕ ಸಿ.ವಿಜಯಕುಮಾರ್, ಪರಿಸರ ಸ್ವಯಂಸೇವಕರಾದ ಸುಗುಣ್ ಗೌಡ, ವಿದ್ಯಾಶಂಕರ್, ಈಥನ್ ರೋಚ್, ಗಣೇಶ್ ಕುಮಾರ್, ನಿಶಾನ್ ಆಳ್ವ, ಸಂಜನ್ ರೈಜ್, ವರುಣ್ ಉಪಸ್ಥಿತರಿದ್ದರು.