ಕಾರ್ಕಳ, ಜೂ.5(DaijiworldNews/HR): ಕೊರೊನಾದ ಎರಡನೇ ಅಲೆಯಲ್ಲಿ ಆಮ್ಲಜನಕ ಕೊರತೆ ಎದುರಾದ ಸಂದರ್ಭದಲ್ಲಿ ಮಾನವೀಯತೆ ಮೆರೆದು ಮನವಿಯನ್ನು ಸ್ಪಂದಿಸಿ ಅನೇಕ ದಾನಿಗಳು ಸಹಕಾರವನ್ನು ನೀಡಿದರು. ಉದ್ಯಮ ಕ್ಷೇತ್ರದವರು ಸಮಾಜಮುಖಿ ಚಟುವಟಿಕೆಗಳಲ್ಲಿ ಕೈ ಜೋಡಿಸಿದಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.
ವಿಕಾಸ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕೊರೊನಾ ನಿಯಂತ್ರಿಸುವ ಸಲುವಾಗಿ ಕ್ಯಾಂಪ್ಕೋ ಸಂಸ್ಥೆಯು ರೂ.7.50 ಲಕ್ಷ ವೆಚ್ಚದಲ್ಲಿ ಕಾರ್ಕಳ ಮತ್ತು ಹೆಬ್ರಿ ಸರಕಾರಿ ಆಸ್ಪತ್ರೆಗಳಿಗೆ ಜನರೇಟರ್ ಗಳನ್ನು ಕೊಡುಗೆಯಾಗಿ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಶಾಸಕ ವಿ.ಸುನೀಲ್ ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಸಮ್ಮುಖದಲ್ಲಿ ಕಾರ್ಕಳ, ಹೆಬ್ರಿ ಸರಕಾರಿ ಆಸ್ಪತ್ರೆಗೆ ಜನರೇಟರ್ಗಳನ್ನು ಹಸ್ತಾಂತರಿಸಿದರು.
ಕಾರ್ಕಳ ಕ್ಷೇತ್ರದ ಕೊವಿಡ್ ಸಮರದಲ್ಲಿ ಸಹಭಾಗಿಗಳಾಗಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮತ್ತು ದಯಾನಂದ ಹೆಗ್ಡೆರವರನ್ನು ಇದೇ ಸಂದರ್ಭದಲ್ಲಿ ಗೌರವಿಸಿ ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಿಶೋರ್ ಕುಮಾರ್ ಕೊಡ್ಗಿ, "ಕಾರ್ಕಳ ಮತ್ತು ನನ್ನ ಕುಟುಂಬಕ್ಕೆ ಪುರಾತನ ನಂಟು ಇದ್ದು ನಾನು ಪ್ರೀತಿಸುವ ಕ್ಷೇತ್ರವಿದು. ಒಬ್ಬ ಕ್ರಿಯಾಶೀಲ ಶಾಸಕರಿರುವ ಈ ಕ್ಷೇತ್ರದ ಕಷ್ಟದ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಆಗುವ ಸಹಾಯಹಸ್ತ ನೀಡಲು ತುಂಬಾ ಹೆಮ್ಮೆಯಾಗುತ್ತಿದೆ. ಕಾರ್ಕಳ ಜನತೆಯ ಆರೋಗ್ಯ ಸುಧಾರಣೆಯಾಗಿ ಶೀಘ್ರ ಕೊರೊನಾ ಮುಕ್ತ ಕಾರ್ಕಳ ನಿರ್ಮಾಣವಾಗಲಿ" ಎಂದು ಹಾರೈಸಿದರು.
ತಹಸಿಲ್ದಾರ್ ಪುರಂದರ ಹೆಗ್ಡೆ, ತಾಲೂಕು ವೈದ್ಯಾಧಿಕಾರಿ ಕೃಷ್ಣಾನಂದ ಶೆಟ್ಟಿ, ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಕೆಎಸ್ ರಾವ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಸದಾಶಿವ ಶೆಟ್ಟಿ, ಬಿಜೆಪಿ ಕ್ಷೇತಾಧ್ಯಕ್ಷ ಮಹಾವೀರ ಹೆಗ್ಡೆ, ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಪುರಸಭೆ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.