ಬಂಟ್ವಾಳ, ಜೂ.5(DaijiworldNews/HR): ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಆಕ್ಸಿಜನ್ ಉತ್ಪಾದನಾ ಘಟಕ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಶನಿವಾರ ಲೋಕಾರ್ಪಣೆ ಗೊಂಡಿತು.
ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಘಟಕವನ್ನು ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಕೊರೊನಾ ನಿಗ್ರಹಕ್ಕೆ ಪೂರಕವಾಗಿ ಆಕ್ಸಿಜನ್ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸ್ಥಾಪನೆಯಾದ ಪ್ರಥಮ ಆಕ್ಸಿಜನ್ ಘಟಕ ಇದಾಗಿದೆ. ಬಂಟ್ವಾಳದಲ್ಲಿ ಕೊರೊನಾ ವಿರುದ್ಧದ ಹೋರಾಟ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಂಸದರಾದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಯ್ಕ್ ಹಾಗೂ ಅಧಿಕಾರಿ ವೃಂದದ ಶ್ರಮವನ್ನು ಅವರು ಶ್ಲಾಘಿಸಿದರಲ್ಲದೆ ಸರಕಾರದ ಮತ್ತು ಜಿಲ್ಲಾಡಳಿತದ ಪರವಾಗಿ ಅಭಿನಂದಿಸಿದರು.
ಇನ್ನು ಈ ಘಟಕದಲ್ಲಿ ಪ್ರತಿ ನಿಮಿಷಕ್ಕೆ 46 ಲೀಟರ್ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿಯೂ ಹಂತ ಹಂತವಾಗಿ ಆಕ್ಸಿಜನ್ ಉತ್ಪಾದನ ಘಟಕ ಸ್ಥಾಪನೆಯಾಗಲಿದೆ" ಎಂದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ರಾಜ್ಯಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿ.ಪಂ. ಸದಸ್ಯ ಎಂ.ತುಂಗಪ್ಪ ಬಂಗೇರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಚೆನ್ನೈತ್ತೋಡಿ ಗ್ರಾ.ಪಂ.ಅಧ್ಯಕ್ಷೆ ಭಾರತಿ ರಾಜೇಂದ್ರ ಪೂಜಾರಿ, ಕುಕ್ಕಿಪಾಡಿ ಅಧ್ಯಕ್ಷೆ ಸುಜಾತ ಆರ್ ಪೂಜಾರಿ, ಉಪಾಧ್ಯಕ್ಷ ಯೋಗೀಶ್ ಆಚಾರ್ಯ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ್ ಶೆಟ್ಟಿ, ಮಂಗಳೂರು ಸಹಾಯಕ ಕಮೀಷನರ್ ಮದನ್ ಮೋಹನ್, ತಹಶಿಲ್ದಾರ್ ರಶ್ಮೀ ಎಸ್. ಆರ್, ಇಂಜಿನಿಯರ್ ಕೃಷ್ಣ, ತಾಲೂಕು ಪ್ರಭಾರ ಆರೋಗ್ಯ ಅಧಿಕಾರಿ ಜಯಪ್ರಕಾಶ್,ಆರೋಗ್ಯ ಕೇಂದ್ರದ ವೈದ್ಯರುಗಳಾದ ಡಾ.ನಿತೀಶ್, ಡಾ.ಜವಾಬುಲ್ಲ, ಡಾ.ವಸುದಾ, ಡಾ.ಅಕ್ಷತಾ ಹಾಗೂ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.