ಮಂಗಳೂರು, ಜೂ.5(DaijiworldNews/HR): ಕೊರೊನಾದ 3ನೇ ಅಲೆಯು ಮಕ್ಕಳಿಗೆ ಬಾಧಿಸದಂತೆ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾ ಪಂಚಾಯತ್ನ ಕಚೇರಿ ಸಭಾಂಗಣದಲ್ಲಿ ಕೊರೊನಾದ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ 3 ನೇ ಅಲೆಯು ಕೊರೊನಾ ನಿರೋಧಕ ಚುಚ್ಚುಮದ್ದು ಹೊಂದದೇ ಇರುವ ಮಕ್ಕಳನ್ನು ಬಾಧಿಸುವ ಸಾಧ್ಯತೆಗಳಿವೆ, ತಜ್ಞರ ಅಭಿಪ್ರಾಯವೂ ಸಹ ಇದಾಗಿದ್ದು ಈ ಹಿನ್ನಲೆಯಲ್ಲಿ ಕೋರೊನಾ ಸೋಂಕು ಮಕ್ಕಳಿಗೆ ಹರಡದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕೊರೊನಾ ಸೋಂಕಿನಿಂದ ದೂರವಿರಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪೋಷಕರಿಗೆ ಹಾಗೂ ಮಕ್ಕಳಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಮಕ್ಕಳ ಸಂರಕ್ಷಣೆಗೆ ಸಂಬಂಧಿಸದಂತೆ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಪಾಲನಾ ಕೇಂದ್ರಗಳಲ್ಲಿರುವ ಮಕ್ಕಳ ಹೆಸರನ್ನು ಒಳಗೊಂಡ ವಿವರ, ಕೋವಿಡ್ನಿಂದ ತಂದೆತಾಯಿ ಕಳೆದುಕೊಂಡವರು ಹಾಗೂ ಏಕಪೋಷಕರ ಮಗುವಿನ ಸಮಗ್ರ ಮಾಹಿತಿಯನ್ನು ಕ್ರೋಢಿಕರಿಸಬೇಕು, ಅಂತಹ ಮಕ್ಕಳ ಸ್ಥಿತಿಗತಿ ಅವರ ಶಿಕ್ಷಣ, ಮನಸ್ಥಿತಿಯನ್ನು ತಿಳಿದು ಮಕ್ಕಳಿಗೆ ಏನೆಲ್ಲಾ ಸಹಕಾರ ನೀಡಬೇಕು ಎಂಬ ಬಗ್ಗೆ ಮಾಹಿತಿ ಹೊಂದಿರಬೇಕು ಎಂದಿದ್ದಾರೆ.
ಕೊರೊನಾ ಸೋಂಕಿನ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಜಾಗೃತಿ ಮೂಡಿಸುವ ಕರಪತ್ರವನ್ನು ಪ್ರತೀ ಮನೆ ಮನೆಗೆ ತಲುಪಿಸುವ ಕೆಲಸವಾಗಬೇಕು ಎಂದರು.
ವಿಶೇಷ ಚೇತನ ಮಕ್ಕಳ ಮಾಹಿತಿಯನ್ನು ಪ್ರತ್ಯೇಕವಾಗಿ ಕ್ರೂಢೀಕರಿಸಬೇಕು. ಇವರುಗಳ ಕಾಳಜಿಯನ್ನು ಮಾಡಬೇಕು ಎಂದ ಅವರು ಶಿಶು ಅಭಿವೃದ್ಧಿ ಅಧಿಕಾರಿಗಳು ಈ ಸಂಬಂಧ ತಾಲೂಕು ಮಟ್ಟದಲ್ಲಿಯೂ ಸಭೆಯನ್ನು ನಡೆಸಬೇಕು ಎಂದು ಸೂಚನೆ ನೀಡಿದರು.
18 ವರ್ಷ ಮೇಲ್ಪಟ್ಟ ವಿಶೇಷ ಚೇತನರು ಹಾಗೂ ಎಂಡೋಸಲ್ಫಾನ್ ಪೀಡಿತರೆಲ್ಲರಿಗೂ ಕೊರೊನಾ ನಿರೋಧಕ ಚುಚ್ಚು ಮದ್ದು ನೀಡುವ ಕೆಲಸವಾಗಬೇಕು ಎಂದ ಅವರು ಬೆಡ್ರೀಡನ್ ನಲ್ಲಿರುವವರಿಗೆ ಮನೆಗಳಿಗೆ ಹೋಗಿ ಚುಚ್ಚುಮದ್ದು ನೀಡುವ ಕೆಲಸವಾಗಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲೇ ಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದೇರ್ಶಕ ಪಾಪಬೋವಿ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.