ಮಂಗಳೂರು, ಜೂ 05 (DaijiworldNews/MS): ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ನಗರದ ಕೆಎಸ್ ರಾವ್ ರಸ್ತೆ ಬಳಿಯ ಕ್ಲಾಸಿಕ್ ಆರ್ಕೇಡ್ ಸಮೀಪದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಬೃಹತ್ ಫ್ಲಾಟ್ನ ತಡೆಗೋಡೆ ಮೇ. ೫ ರ ಮುಂಜಾನೆ ನಸುಕಿನ ಜಾವ ಕುಸಿದು ಬಿದ್ದು ಕೆಳಭಾಗದಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ವಾಹನಗಳು ಸಂಪೂರ್ಣ ಜಖಂಗೊಂಡಿವೆ.
ತಡೆಗೋಡೆ ಕುಸಿತದಿಂದ ಖಾಸಗಿ ವಾಹಿನಿಗೆ ಸೇರಿದ ಐದು ಟಿಟಿ ವಾಹನಗಳು ಸಂಪೂರ್ಣ ಜಖಂಗೊಂಡಿವೆ. ಈ ವಾಹನದ ಒಳಗಡೆ ನೇರ ಪ್ರದರ್ಶನಕ್ಕಾಗಿ ಇರುವ ಬೃಹತ್ ಎಲ್ಇಡಿ ಟಿವಿಗಳು, ಕಂಪ್ಯೂಟರ್, ಲ್ಯಾಪ್ಟಾಪ್ ಮತ್ತಿತರ ಎಲೆಕ್ಟ್ರೋನಿಕ್ಸ್ ಸೊತ್ತುಗಳನ್ನು ಇರಿಸಲಾಗಿದ್ದು, ಇವೆಲ್ಲವೂ ಸಂಪೂರ್ಣ ಹಾನಿಗೊಂಡಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ವಸತಿ ಸಮ್ಮುಚ್ಚಯವು ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ತಡೆಗೋಡೆ ಕಾಮಗಾರಿ ಸರಿಯಿಲ್ಲ ಎಂದು ಈ ಹಿಂದೆ ಸ್ಥಳೀಯರು ಪ್ರತಿಭಟನೆ ನಡೆಸಿ ದೂರು ನೀಡಿದ್ದರು.
ಅಲ್ಲದೆ ಸೂಕ್ತವಾಗಿ ನೀರು ಹರಿದು ಹೋಗುವ ಚರಂಡಿ ವ್ಯವಸ್ಥೆಯೂ ಸರಿಯಾಗಿಲ್ಲದ ಕಾರಣ ಭಾರೀ ಮಳೆ ಬಂದ ಸಂದರ್ಭ ಈ ಹಿಂದೆಯೂ ಹಲವು ಬಾರಿ ಇಲ್ಲಿ ನೀರು ನಿಂತು ಕೆಳಭಾಗದ ಫ್ಲ್ಯಾಟ್ಗಳಿಗೆ ನೀರು ನುಗ್ಗಿತ್ತು. ಇದೀಗ ತಡೆಗೋಡೆಯೇ ಕುಸಿದು ಬಿದ್ದು ಅಪಾರ ಹಾನಿ ಸಂಭವಿಸಿದೆ.
ಇನ್ನು ಈ ಘಟನೆ ಕುರಿತಂತೆ ಬಂದರು ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ವಾಹನಗಳನ್ನು ತೆರವುಗೊಳಿಸಿದರು. ಘಟನಾ ಸ್ಥಳಕ್ಕೆ ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರ್ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದರು