ಪೊಲೀಸ್ ಸಿಬ್ಬಂದಿಯ ಕೊವೀಡ್ ಪಯಣ - ಸಾಕ್ಷ್ಯಚಿತ್ರ ಬಿಡುಗಡೆ
Sat, Jun 05 2021 09:00:03 AM
ಮಂಗಳೂರು, ಜೂ 05 (DaijiworldNews/MS): ತನ್ನ ಕರ್ತವ್ಯದ ಸಂದರ್ಭದಲ್ಲಿಯೇ ಕೋವಿಡ್ ಸೋಂಕಿಗೆ ಒಳಗಾಗಿ ಐಸೋಲೇಶನ್ನಲ್ಲಿದ್ದು ಮತ್ತೆ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಸಿಬ್ಬಂದಿಯ ‘ಕೋವಿಡ್ - ಜರ್ನಿ ಆಫ್ ಎ ಕಾಪ್’ ಎಂಬ ಸಾಕ್ಷ್ಯಚಿತ್ರವನ್ನು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಬಿಡುಗಡೆಗೊಳಿಸಿದ್ದಾರೆ. ಮಂಗಳೂರು ನಗರ ಪೊಲೀಸರು ಪ್ರಸ್ತುತಪಡಿಸಿದ ಹಾಗೂ ಸಹಾಯಕ ರಿಸರ್ವ್ ಸಬ್ ಇನ್ಸ್ಪೆಕ್ಟರ್ ಅರುಣ ಆಳ್ವಾ ಅವರನ್ನು ಒಳಗೊಂಡ ಸಾಕ್ಷ್ಯಚಿತ್ರವನ್ನು ರಾಹುಲ್ ವಸಿಷ್ಠ ನಿರ್ದೇಶಿಸಿದ್ದಾರೆ.
ಆ ಬಳಿಕ ಮಾತನಾಡಿದ ಆಯುಕ್ತರು " ರಾಹುಲ್ ವಸಿಷ್ಠ ನಿರ್ದೇಶನದ ಐದು ನಿಮಿಷಗಳ ಸಾಕ್ಷ್ಯಚಿತ್ರದಲ್ಲಿ ಕೋವಿಡ್ ನ್ನು ನಿಭಾಯಿಸಲು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಹಾಗೂ ಜಾಗೃತಿ ಮೂಡಿಸಲು ಸಹಾಯಕವಾಗುತ್ತದೆ . ಕೊರೊನಾ ಸೋಂಕಿಗೆ ತುತ್ತಾಗಿ ಗುಣಮುಖರಾಗಿ ಮತ್ತೆ ಕರ್ತವ್ಯಕ್ಕೆ ಹಾಜರಾದ ಅರುಣ್ ಅಳ್ವಾ ಅವರ ನಿಜವಾದ ಅನುಭವವೇ ಸಾಕ್ಷ್ಯಚಿತ್ರ. ಸಾಂಕ್ರಾಮಿಕ ಸಮಯದಲ್ಲಿ ಪಟ್ಟುಬಿಡದೆ ಕೆಲಸ ಮಾಡಿದ ಎಲ್ಲಾ ಕೋವಿಡ್ ಯೋಧರಿಗೆ ಈ ಸಾಕ್ಷ್ಯಚಿತ್ರವನ್ನು ಸಮರ್ಪಿಸಲಾಗಿದೆ. ಸಾಕ್ಷ್ಯಚಿತ್ರವು ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಕನ್ನಡ ಭಾಷೆಯಲ್ಲಿದೆ " ಎಂದು ಹೇಳಿದರು.
ಕೋವಿಡ್ ಪ್ರಥಮ ಅಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 330 ಮಂದಿ ಸೋಂಕಿಗೊಳಾಗಿ ಒಬ್ಬರು ಪ್ರಾಣ ಕಳೆದು ಕೊಂಡಿದ್ದಾರೆ. 2ನೆ ಅಲೆಯಲ್ಲಿ ಈವರೆಗೆ 88 ಮಂದಿ ಸೋಂಕಿತರಾಗಿ ಓರ್ವರನ್ನು ಇಲಾಖೆ ಕಳೆದುಕೊಂಡಿದೆ ಎಂದು ಅವರು ಹೇಳಿದರು.
ಸಾಕ್ಷ್ಯಚಿತ್ರದ ನಿರ್ದೇಶಕ, ರಾಹುಲ್, ಯುವ ಪ್ರತಿಭೆಯಾಗಿದ್ದು, ಅವರು ಸಂಗೀತ ಮತ್ತು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಈ ಸಂದರ್ಭ ಡಿಸಿಪಿ ಹರಿರಾಂ ಶಂಕರ್, ಎಸಿಪಿ ರಂಜಿತ್ ಕುಮಾರ್, ಸಾಕ್ಷಚಿತ್ರ ನಿರ್ದೇಶಕ ರಾಹುಲ್ ವಶಿಷ್ಟ, ಸಾಕ್ಷಚಿತ್ರದ ಪಾತ್ರಧಾರಿ ಹಾಗೂ ಪೊಲೀಸ್ ಕಮಿಷನರ್ ವಾಹನ ಚಾಲಕ ಅರುಣ್ ಆಳ್ವ ಉಪಸ್ಥಿತರಿದ್ದರು.