ಮಂಗಳೂರು, ಜೂ.04 (DaijiworldNews/HR): ಕೊರೊನಾ ಸೋಂಕಿತ ಗರ್ಭಿಣಿಗೆ ಚಿಕಿತ್ಸೆಗೆ ನಿರಾಕರಣೆ ಎಂಬುದು ಸುಳ್ಳು ಆರೋಪವಾಗಿದ್ದು, ವೈದ್ಯರ ವಿರುದ್ಧ ಉದ್ದೇಶ ಪೂರ್ವಕವಾಗಿಯೇ ಇಂತಹ ಆರೋಪಗಳನ್ನು ಮಾಡಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಆರಂಭದಿಂದಲೂ ಸಹಕಾರ ನೀಡಿದ ವೈದ್ಯರನ್ನೇ ಕೆಟ್ಟವರನ್ನಾಗಿ ಬಿಂಬಿಸಲಾಗಿದೆ ಎಂದು ಮಂಗಳೂರು ತಜ್ಞ ವೈದ್ಯರ ಸಂಘ (ಎಎಂಸಿ- ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್) ಆರೋಪಿಸಿದೆ.
ಈ ಕುರಿತು ಇಂದು ಐಎಂಎ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕ ಹಾಗೂ ಎಎಂಸಿ ವತಿಯಿಂದ ಕರೆದ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಎಂಸಿ ಅಧ್ಯಕ್ಷ ಕೆ.ಆರ್.ಕಾಮತ್ ಮತ್ತು ತಜ್ಞ ವೈದ್ಯರ ಸಂಘದ ಕಾನೂನು ಸಲಹಾ ಘಟಕದ ಅಧ್ಯಕ, ಡಾ.ಸತೀಶ್ ಭಟ್, "ವೈದ್ಯರ ಮೇಲಿನ ಇಂತಹ ಆರೋಪಗಳು ಕೊರೊನಾ ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ಆತ್ಮಸ್ಥೈರ್ಯವನ್ನು ಕುಗ್ಗಿಸಿದೆ" ಎಂದಿದ್ದಾರೆ.
ತಜ್ಞ ವೈದ್ಯರ ಸಂಘದ ಭಾವಿ ಅಧ್ಯಕ್ಷ ಡಾ. ಲಕ್ಷ್ಮಣ ಪ್ರಭು ಮಾತನಾಡಿ, "ಕೊರೊನಾ ಸೋಂಕಿತ ಗರ್ಭಿಣಿ ಮಹಿಳೆಯ ಪ್ರಕರಣದಲ್ಲಿ ಆಕೆ ಆರಂಭದಲ್ಲೇ ತನ್ನ ವೈದ್ಯರು ಹೇಳಿದ ಸಲಹೆಯನ್ನು ಅನುಸರಿಸಿಲ್ಲ, ಕೊರೊನಾ ಸೋಂಕಿತ ಗರ್ಭಿಣಿಗೆ ವೆಂಟಿಲೇಟರ್ ಅಗತ್ಯವಿದ್ದಾಗ ಆ ಸೌಲಭ್ಯ ಎಲ್ಲಿದೆ ಎಂದು ವಿಚಾರಿಸಿಕೊಂಡು, ವೈದ್ಯರು ಹೇಳಿದ ಸಲಹೆಯನ್ನು ಅನುಸರಿಸಿದ್ದರೆ ಆಸ್ಪತ್ರೆಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ" ಎಂದರು.
ಡಾ. ಪ್ರಿಯಾ ಬಳ್ಳಾಲ್ ಮಾತನಾಡಿ, "ನಾನು ವೈದ್ಯ ವೃತ್ತಿಗೆ ಬಂದು 21 ವರ್ಷಗಳಾಗಿದೆ ಯಾವತ್ತೂ ರೋಗಿಗೆ ತೊಂದರೆಯಾಗುವ ರೀತಿಯಲ್ಲಿ ನಾನು ನಡೆದುಕೊಂಡಿಲ್ಲ. ಈ ಪ್ರಕರಣದಲ್ಲೂ ನಾನು ಕೊರೊನಾ ಕಾರಣಕ್ಕೆ ಆಕೆಗೆ ಚಿಕಿತ್ಸೆ ನಿರಾಕರಣೆ ಮಾಡಿಲ್ಲ. ಪ್ರತೀ ಹಂತದಲ್ಲೂ ಆಕೆ ಹಾಗೂ ಆಕೆಯ ಮನೆಯವರಿಗೆ ಸಲಹೆ ನೀಡಿದ್ದೇನೆ. ಮೇ 17ರಂದು ಆಕೆ ನನಗೆ ಕರೆ ಮಾಡಿ ಕೆಮ್ಮು, ಶೀತ ಇರುವುದಾಗಿ ಹೇಳಿದಾಗ, ಕೊರೊನಾ ತಪಾಸಣೆ ಮಾಡಬೇಕೆಂದು ಸಲಹೆ ನಾನು ನೀಡಿದ್ದೆ, ಆ ಬಳಿಕ ಮೇ. 19ರಂದು ರಾತ್ರಿ ಕರೆ ಮಾಡಿ ಉಸಿರಾಟದ ತೊಂದರೆ ಇರುವ ಬಗ್ಗೆ ತಿಳಿಸಿದ್ದರು. ಆಗಲೂ ಆಸ್ಪತ್ರೆಗೆ ದಾಖಲಾಗಿ ಕೊರೊನಾ ಪರೀಕ್ಷೆ ಮಾಡಿಸುವಂತೆ ಸೂಚನೆ ನೀಡಿದ್ದೆ. ಉಸಿರಾಟದ ತೊಂದರೆಯಿಂದ ಆಕೆಯ ಪರಿಸ್ಥಿತಿ ಹದಗೆಟ್ಟಿದ್ದಾಗ ಇಂತಹ ಪರಿಸ್ಥಿತಿಯಲ್ಲಿ ಉನ್ನತ ಮಟ್ಟದ ಚಿಕಿತ್ಸೆ ಅಗತ್ಯವಿದ್ದು, ನನ್ನ ಕೈ ಮೀರಿದೆ ಎಂದು ತಿಳಿಸಿ ಲೇಡಿಗೋಶನ್ ಹಾಗೂ ಕೆಎಂಸಿಯ ಹೆರಿಗೆ ವಿಭಾಗದಲ್ಲಿ ನಾನು ಪ್ರಮುಖ ವೈದ್ಯೆಯಾಗಿರುವ ಕಾರಣ ಅಲ್ಲಿಯ ವೈದ್ಯರಿಗೆ ಸೂಚನೆ ನೀಡಿ ಸಹಕರಿಸುವಂತೆ ತಿಳಿಸಿದ್ದೆ. ನಾನು ಯಾವ ಆಸ್ಪತ್ರೆಯಲ್ಲೂ ದಾಖಲು ಮಾಡಿಕೊಳ್ಳದಂತೆ ಹೇಳಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಮಹಿಳೆಗೆ ಲೇಡಿಗೋಶನ್ನಲ್ಲಿ ಮೇ 20ರಂದು ರಾತ್ರಿ ಹೆರಿಗೆ ಆದ ಬಳಿಕ ಮೇ 21ರಂದು ಆಕೆಯ ಸಂಬಂಧಿಕರೊಬ್ಬರು ಕರೆ ಮಾಡಿ ಹೆರಿಗೆಯಾಗಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಇದೀಗ ನನ್ನ ಮೇಲೆ ಆಪಾದಿಸುವುದನ್ನು ನಾನು ನಿರೀಕ್ಷಿಸಿರಲಿಲ್ಲ" ಎಂದಿದ್ದಾರೆ.
ಡಾ.ಮುರಳಿ ಮಾತನಾಡಿ, "ಕೊರೊನಾದ ಮೊದಲ ಅಲೆಯಿಂದ ದ್ವಿತೀಯ ಅಲೆಯ ಸಂದರ್ಭದಲ್ಲೂ ನಾನು ವೆನ್ಲಾಕ್ನಲ್ಲಿ ನನ್ನ ಮನೆಯವರಿಂದಲೂ ದೂರವಿದ್ದು ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಪ್ರಕರಣದಲ್ಲಿಯೂ ಆ ಮಹಿಳೆ ಹಾಗೂ ಆಕೆಯ ಮನೆಯವರಿಗೆ ಧೈರ್ಯ ತುಂಬಿದ್ದೇನೆಯೇ ಹೊರತು ಅವರು ಆಪಾದಿಸಿರುವಂತೆ ನಡೆದುಕೊಂಡಿಲ್ಲ. ಅಲ್ಲಿ ನಾನು ಮಾಸ್ಕ್ ತೆಗೆಸಿದ್ದೇನೆ ಎಂದು ಆರೋಪಿಸಲಾಗಿದ್ದು, ಐಸಿಯು ವಾರ್ಡ್ನಲ್ಲಿ ಸಿಸಿಟಿವಿ ಕ್ಯಾಮರಾ ಇದೆ. ಅದರ ದಾಖಲೆ ಸೇರಿಂತೆ ನನ್ನ ಎಲ್ಲಾ ನಿವೇದನೆಯನ್ನು ನಾನು ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟವರಿಗೆ ನೀಡಿದ್ದೇನೆ" ಎಂದು ತಿಳಿಸಿದರು.
ಇನ್ನು ಇಂಡಿಯಾನ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ನರ್ಸಿಂಗ್ ಮತ್ತು ಹಾಸ್ಪಿಟಲ್ಸ್ ಅಸೋಸಿಯೇಶನ್ನ ಮಾಜಿ ಅಧ್ಯಕ್ಷ ಡಾ.ಯೂಸುಫ್ ಕುಂಬ್ಳೆ ಮಾತನಾಡಿ, "ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಯಾಗಬೇಕು ಹಾಗೂ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಬೇಕು. ವೈದ್ಯರ ಮೇಲಿನ ಈ ರೀತಿಯ ಆರೋಪಗಳು ಅವರು ಕರ್ತವ್ಯದಿಂದ ಹಿಂದೆ ಸರಿಯುವಂತೆ ಮಾಡುತ್ತಿದೆ" ಎಂದು ಹೇಳಿದ್ದಾರೆ.