ಕಾರ್ಕಳ, ಜೂ.04 (DaijiworldNews/HR): ಮುಂಡ್ಲಿ ಕಿಂಡಿಅಣೆಕಟ್ಟು ಗೇಟ್ ಕಾಮಗಾರಿ ಸ್ಥಗಿತಗೊಳಿಸುವಂತೆ ಮುಂಡ್ಲಿ ನೀರು ಸರಬರಾಜು ಕೇಂದ್ರದ ಮಿನಿ ಹೈಡ್ರೋ ಪ್ರಾಜೆಕ್ಟ್ ಸಂಸ್ಥೆಗೆ ಕಾರ್ಕಳ ಪುರಸಭೆ ಸೂಚಿಸಿದೆ.
ಪುರಸಭೆ ಮುಖ್ಯಾಧಿಕಾರಿ ರೂಪ ಶೆಟ್ಟಿ, ಅಧ್ಯಕ್ಷೆ ಸುಮಾಕೇಶವ್, ಇಂಜಿನೀಯರ್ ಸೋಮಶೇಖರ್, ಪುರಸಭೆ ಸದಸ್ಯ ಯೋಗೀಶ್ ದೇವಾಡಿಗ, ದುರ್ಗ ಗ್ರಾ.ಪಂ ಅಧ್ಯಕ್ಷ ಸತೀಶ್ ನಾಯಕ್, ಶಿರ್ಲಾಲು ಗ್ರಾ.ಪಂ ಅಧ್ಯಕ್ಷ ರಮಾನಂದ ಪೂಜಾರಿ, ಸಾಮಾಜಿಕ ಕಾರ್ಯಕರ್ತ ರಾಜೇಂದ್ರ ಕುಮಾರ್ ಮುಂಡ್ಲಿ ಜಲಾಶಯದ ಜಲವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೈಡ್ರೋಲಿಕ್ ಗೇಟ್ ಅಳವಡಿಕೆಯ ಅಧಿಕಾರಿಗಳ ಜತೆ ಚರ್ಚಿಸಿದರು. ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು.
ಕಾರ್ಕಳ ಪುರಸಭೆ ವ್ಯಾಪ್ತಿಗೆ ಸಮಗ್ರ ಕುಡಿಯುವ ನೀರಿನ ಮೂಲವಾದ ಮುಂಡ್ಲಿ ಹೊಳೆಯಲ್ಲಿ ಮಳೆಗಾಲ ಅತಿಯಾದ ಮಳೆಗೆ ನೀರಿನ ಒಳ ಹರಿವು ಹೆಚ್ಚುತ್ತದೆ. ದುರ್ಗ ಪಂಚಾಯತ್ ನವರು ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಗೇಟ್ ತೆರವುಗೊಳಿಸುವುದು ವಿಳಂಬವಾಗುವುದರಿಂದ ಡ್ಯಾಂ ಹಿಂದಿನ ಜಮೀನುಗಳು ನೀರಿನಿಂದ ಜಲಾವ್ರತವಾಗುತ್ತದೆ. ನಷ್ಟ ಕೂಡ ಉಂಟಾಗುತ್ತದೆ. ಮಳೆಗಾಲ ಪ್ರಾರಂಭವಾಗುವುದರಿಂದ ಗೇಟ್ ಕಾಮಗಾರಿಯನ್ನು ಸ್ಥಗಿತಗೊಳಿಸಿ ಮಳೆಗಾಲದ ಮುಗಿದ ನಂತರದಲ್ಲಿ ಮುಂದುವರೆಸುವಂತೆ ಪುರಸಭೆ ಅಽಕಾರಿಗಳು ಸೂಚಿಸಿದರು. ಈ ಬಗ್ಗೆ ದುರ್ಗ ಗ್ರಾ.ಪಂ ವತಿಯಿಂದ ಪುರಸಭೆಗೆ ಮನವಿಯನ್ನು ಕೂಡ ನೀಡಲಾಗಿತ್ತು.
ದುರ್ಗ ಗ್ರಾಮದ ಸ್ವರ್ಣ ಹೊಳೆಗೆ ತಾಗಿಕೊಂಡು ಜಿವಿಆರ್ ಪವರ್ ಪ್ರಾಜೆಕ್ಟ್ ಕಂಪೆನಿ ಜಲವಿದ್ಯುತ್ ಸ್ಥಾವರವನ್ನು ಕಾನೂನು ಬಾಹಿರವಾಗಿ ನಡೆಸುತ್ತಿದೆ. ಪರವಾನಿಗೆ ನವೀಕರಿಸದೆ 2 ವರ್ಷವಾಗಿದೆ. ಅವು ಮುಗಿದಿದ್ದರೂ ಜಿಲ್ಲಾಧಿಕಾರಿಗಳ ಅನುಮತಿ ಪತ್ರವಿದೆಯೆಂದು ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ಕಂಪೆನಿ ವಂಚಿಸುತ್ತಿದ್ದು, ಅವೈಜ್ಞಾನಿಕ ಕಾಮಗಾರಿಯಿಂದ ಈ ಭಾಗದ 12 ಕ್ಕೂ ಅಧಿಕ ಮನೆಗಳಿಗೆ ಹಾಗೂ ಕೃಷಿ ಭೂಮಿಗೆ ಹಾನಿಯಾಗಿ ನಷ್ಟವಾಗುತ್ತಿದೆ. ಕಂಪೆನಿ ಪರಿಹಾರ ಕೂಡ ನೀಡುತಿಲ್ಲ. ಕಂಪೆನಿ ಅವೈಜನಿಕ ಕಾನೂನು ಬಾಹಿರವಾಗಿ ನಡೆದುಕೊಂಡಿರುವುದಕ್ಕೆ ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳು ಇವೆ. ಕಂಪೆನಿ ಕೆಲಸವನ್ನು ಶಾಶ್ವತ ನಿಲ್ಲಿಸುವುದು ಸೂಕ್ತ ಜತೆಗೆ ಕೃಷಿಕರಿಗೆ ಮಳೆಗಾಲ ಆಗುವ ನಷ್ಟವನ್ನು ಕಂಪೆನಿ ಭರಿಸಬೇಕೆಂದು ದುರ್ಗ ಗ್ರಾ.ಪಂ ಅಧ್ಯಕ್ಷ ಸತೀಶ್ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.