ಕಾರ್ಕಳ, ಜೂ 4(DaijiworldNews/MS): ವಿಕಲಚೇತನರ ಹಾಗೂ ಖಾಸಗಿ ವಿಶೇಷ ಶಾಲಾ ಶಿಕ್ಷಕರ ಬಗ್ಗೆ ಸರಕಾರದ ನಿರ್ಲಕ್ಷ್ಯ ವಿಕಲಚೇತನರು ಹಾಗೂ ಖಾಸಗಿ ವಿಶೇಷ ಶಾಲಾ ಶಿಕ್ಷಕರು ಕೊರೊನಾ ಸಂದರ್ಭದಲ್ಲಿ ಸರಕಾರದಿಂದಯಾವುದೇ ಸವಲತ್ತು ಲಭಿಸದೆ ವಂಚಿತರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಶಿಕ್ಷಕ ಶಿಕ್ಷಕೇತರ ಸಂಘದ ರಾಜ್ಯಧ್ಯಕ್ಷೆ ಡಾ. ಕಾಂತಿ ಹರೀಶ್ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಡಾ. ಕಾಂತಿ ಹರೀಶ್
ಶಿಶು ಕೇಂದ್ರಿಕೃತ ಸಹಾಯಧನಯೋಜನೆಯಡಿಯಲ್ಲಿ ಈ ಹಿಂದೆ ನೀಡುತ್ತಿದ್ದ ಆಹಾರ ಸಾಮಗ್ರಿಗಳ ವೆಚ್ಚವನ್ನು ಕರೊನಾ ಸಂದರ್ಭದಲ್ಲಿ ಕಡಿತಗೊಳಿಸಲಾಗಿದೆ. ಆಹಾರ ಸಾಮಗ್ರಿ ವೆಚ್ಚ ನೀಡುತ್ತಿದ್ದರೆ ವಿಶೇಷ ಮಕ್ಕಳು ತರಬೇತಿ ಪಡೆಯುತ್ತಿದ್ದ ಸಂಸ್ಥೆಗಳ ಮೂಲಕ ಮಕ್ಕಳ ಮನೆಗಳಿಗೆ ಫುಡ್ಕಿಟ್ ತಲುಪಿಸುವ ಸಹಕಾರಿಯಾಗುತ್ತಿತ್ತು.
ಅನುದಾನಿತ ವಿಶೇಷ ಶಾಲೆಯ ಶಿಕ್ಷಕರಿಗೆ ಸರಕಾರದ ಗೌರವಧನ ಲಭಿಸುತ್ತಿದೆ. ಅನುದಾನ ರಹಿತ ಸಂಸ್ಥೆಯ ಶಿಕ್ಷಕರಿಗೆ ಸಂಸ್ಥೆಯ ವತಿಯಿಂದಲೂ ಗೌರವಧನ ನೀಡಲಾಗುತ್ತಿಲ್ಲ. ಕರೊನಾದಿಂದಾಗಿ ಸಂಸ್ಥೆಯಲ್ಲಿ ಮಕ್ಕಳ ಹಾಜರಾತಿ ಇಲ್ಲ ಹಾಗೂ ದೇಣಿಗೆ ಸಂಗ್ರಹವಾಗುತ್ತಿಲ್ಲ. ಸಂಸ್ಥೆಯವರು ವೇತನ ಪಾವತಿಸಲು ಅಸಹಾಯಕರಾಗಿದ್ದಾರೆ.
ಖಾಸಗಿ ಶಾಲಾ ಶಿಕ್ಷಕರಿಗೆ ರೂ.೫,೦೦೦ ಘೋಷಿಸಿರುವಂತಹ ಸೌಲಭ್ಯವನ್ನು ಖಾಸಗಿ ಶಾಲೆಯಲ್ಲಿರುವ ವಿಶೇಷ ಶಿಕ್ಷಕರಿಗೂ ಕಲ್ಪಿಸುವಂತಾಗಬೇಕು ಎಂದು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.