ಮಂಗಳೂರು, ಜೂ 4(DaijiworldNews/MS): ಮುಂಗಾರು ಮಾರುತಗಳು ರಾಜ್ಯವನ್ನು ಪ್ರವೇಶಿಸುವ ಮೊದಲೇ ಕರಾವಳಿ ಕರ್ನಾಟಕದಲ್ಲಿ ಉತ್ತಮ ಮಳೆಯಾಗಲು ಪ್ರಾರಂಭಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜೂನ್ 3 ರ ಗುರುವಾರದಿಂದ ಉತ್ತಮ ಮಳೆಯಾಗಿದ್ದು ಶುಕ್ರವಾರ ಕೂಡ ಮಳೆ ಮುಂದುವರೆದಿದೆ. ಇದು ಇನ್ನು ನಾಲ್ಕು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಭಾಗದಲ್ಲಿ ಕಾರ್ಮೊಡಗಳು ಆಕಾಶವನ್ನು ಆವರಿಸಿದ್ದು ವಿವಿಧ ತೀವ್ರತೆಯೊಂದಿಗೆ ಮಳೆ ಸತತವಾಗಿ ಸುರಿಯುತ್ತಿದೆ. ಗುರುವಾರ ರಾತ್ರಿ, ಗುಡುಗು ಮತ್ತು ಮಿಂಚು ಸಹಿತ ಮಳೆಯಾಗಿದೆ. ಭಾರಿ ಮಳೆಯಿಂದಾಗಿ, ಜಿಲ್ಲೆಗಳ ಹಲವಾರು ಭಾಗಗಳಲ್ಲಿ ತಗ್ಗು ಪ್ರದೇಶಗಳು ನೀರಿನಿಂದ ಆವೃತವಾಗಿವೆ. ಲಾಕ್ಡೌನ್ನ ಕಾರಣದಿಂದ ರಸ್ತೆಯ ವಾಹನ ಸಂಚಾರ ಅತ್ಯಲ್ಪವಾಗಿರುವುದರಿಂದ ಹೆಚ್ಚಿನ ಸಮಸ್ಯೆಯನ್ನು ಸೃಷ್ಟಿಸಿಲ್ಲ.
ಇನ್ನು ಕೇರಳಕ್ಕೆ ನೈರುತ್ಯ ಮಾರುತಗಳು ಪ್ರವೇಶಿಸಿದ್ದು, ಜೂನ್ 6 ಅಥವಾ 7ರಂದು ಕರ್ನಾಟಕಕ್ಕೆ ಮುಂಗಾರು ಕಾಲಿಡುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಹೇಳಿದೆ. ಹವಾಮಾನ ಇಲಾಖೆ ವರದಿಗಳ ಪ್ರಕಾರ, ಜೂನ್ 6ರ ತನಕವೂ ರಾಜ್ಯಾದ್ಯಂತ ಗುಡುಗು ಸಹಿತ ಮಳೆ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ. ಶುಕ್ರವಾರ ಗುಡುಗು, ಸಿಡಿಲಿನೊಂದಿಗೆ ಭಾರೀ ಮಳೆ ಸುರಿಯುವ ನಿರೀಕ್ಷೆಯಿದ್ದು, ಕರಾವಳಿ ಜಿಲ್ಲೆಗಳ ಸಹಿತ ಒಟ್ಟು 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.