ಕಾಸರಗೋಡು, ಜೂ 4 (DaijiworldNews/MS): ವಿದ್ಯುತ್ ಶಾಕ್ ತಗಲಿ ಮಹಿಳೆ ಮೃತಪಟ್ಟ ದಾರುಣ ಘಟನೆ ಬದಿಯಡ್ಕ ಸಮೀಪದ ಏತಡ್ಕ ಅಳಕ್ಕೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಏತಡ್ಕ ಅಳಕ್ಕೆಯ ರಾಮಚಂದ್ರ ಮಣಿಯಾಣಿ ಎಂಬವರ ಪತ್ನಿ ಸುಜಾತಾ ( 50) ಮೃತಪಟ್ಟವರು. ಉದ್ಯೋಗ ಖಾತರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ದಾರಿ ಮಧ್ಯೆ ಈ ಘಟನೆ ನಡೆದಿದೆ.
ದಾರಿ ಮಧ್ಯೆ ಪೊದೆ ಬಳ್ಳಿಗಳ ನಡುವೆ ಹಾದು ಹೋದ ಎಚ್ . ಟಿ ವಿದ್ಯುತ್ ತಂತಿಯಿಂದ ಈ ಘಟನೆ ನಡೆದಿದ್ದು , ಶಾಕ್ ತಗಲಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬದಿಯಡ್ಕ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ್ದು , ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಪ್ರದೇಶದಲ್ಲಿ ಕಾಡು ಪೊದೆಗಳ ನಡುವೆ ವಿದ್ಯುತ್ ತಂತಿಗಳು ಹಾದು ಹೋಗಿದ್ದು , ಮಳೆಯಾದುದರಿಂದ ಈ ಹಸಿರು ಬಳ್ಳಿ, ಪೊದೆಗಳ ಮೂಲಕ ವಿದ್ಯುತ್ ಪ್ರವಹಿಸುತ್ತಿದೆ. ಈ ಹಿಂದೆಯೂ ಹಲವರಿಗೆ ಶಾಕ್ ತಗಳಿದ್ದು , ಅಪಾಯದಿಂದ ಪಾರಾಗಿದ್ದಾರೆ.
ಮೂರು ವರ್ಷಗಳ ಹಿಂದೆ ಈ ಪರಿಸರದಲ್ಲಿ ಇನ್ನೊಂದು ಘಟನೆ ನಡೆದಿತ್ತು . ಏತಡ್ಕ ಶಾಲೆಯಿಂದ ಮನೆಗೆ ಮರಳುತ್ತಿದ್ದ ಅರ್ಪಿತಾ ಎಂಬ ಒಂದನೇ ತರಗತಿ ವಿದ್ಯಾರ್ಥಿನಿ ನೆಲಕ್ಕೆ ಬಿದ್ದಿದ್ದ ತಂತಿ ತುಳಿದು ಮೃತಪಟ್ಟಿದ್ದು , ತಾಯಿ ಅದೃಷ್ಟವಶಾತ್ ಪಾರಾಗಿದ್ದರು.