ಕಾರ್ಕಳ, ಜೂ. 03 (DaijiworldNews/SM): ವರದಕ್ಷಿಣೆ ನೀಡುವಂತೆ ಮಹಿಳೆಯೊಬ್ಬರಿಗೆ ಆಕೆಯ ಪತಿ ಹಾಗೂ ಇತರರು ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ತೆಳ್ಳಾರಿನ ಮಹಿಳೆ ಪ್ರಕರಣದ ದೂರುದಾರರು. 2016ರ ಆಗಸ್ಟ್ 14ರಂದು ಇವರ ವಿವಾಹವು ಕಾಪು ಪಕೀರನ ಕಟ್ಟೆ ಇರ್ಫಾನ್ ಎಂಬವರೊಂದಿಗೆ ನಡೆದಿತ್ತು. ಕಾರ್ಕಳದ ಮದೀನಾ ಮಸೀದಿಯಲ್ಲಿ ಇಸ್ಲಾಂ ಸಂಪ್ರದಾಯದಂತೆ ವಿವಾಹ ನೆರವೇರಿತು. ಆ ಸಂದರ್ಭದಲ್ಲಿ ವರದಕ್ಷಿಣೆಯಾಗಿ 12 ಪವನ್ ಚಿನ್ನಾಭರಣ ನೀಡಲಾಗಿತ್ತು.
ನಂತರದ ದಿನಗಳಲ್ಲಿ ಕ್ಷುಲ್ಲಕ ವಿಚಾರದಲ್ಲಿ ದಂಪತಿಗಳ ನಡುವೆ ಅಗಿಂದಾಗೆ ನಡೆಯುತ್ತಿದ್ದ ಜಗಳವು ದಾಂಪತ್ಯ ಜೀವನವೇ ಮುಳುವಾಗತೊಡಗಿತು. ಆ ಸಂದರ್ಭದಲ್ಲಿ ಪತಿಯ ಮನೆಯಲ್ಲಿ ಬೈದು, ಹೊಡೆದು ಆಹಾರವೇ ನೀಡದೇ ಉಪವಾಸದಲ್ಲಿ ಹಾಕುತ್ತಿದ್ದರೆಂದು ನಜೀಮಾ ದೂರಿನಲ್ಲಿ ವಿವರಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಯ ನಡುವೆ ನಜೀಮಾಳು ಹೆಣ್ಣು ಮಗುವೊಂದನ್ನು ಜನ್ಮ ನೀಡಿದ್ದಳು. ಹೆಣ್ಣು ಮಗು ನಮಗೆ ಬೇಡ ಡೈವೋರ್ಸ್ ಕೊಡು ಎಂಬುದಾಗಿಯೂ ಪತಿ ಬೆದರಿಕೆ ಹಾಕುತ್ತಿದ್ದ. ಈ ಎಲ್ಲಾ ಕಾರಣಗಳಿಂದಾಗಿ ನಜೀಮಾ ಮಾನಸಿಕವಾಗಿ ನೊಂದುಕೊಂಡಿದ್ದಾಳೆ.
2020 ಡಿಸೆಂಬರ್ 20ರಂದು ನಜೀಮಾಳ ತಾಯಿಯ ಮನೆಗೆ ಬಂದ ಆರೋಪಿ ಪತಿ ಇರ್ಫಾನ್ ಡೈವೋರ್ಸ್ ನೀಡುವಂತೆ ಒತ್ತಾಯಿಸಿ ಗಲಾಟೆ ಮಾಡಿರುವುದಾಗಿ ತಿಳಿದುಬಂದಿದೆ. ನಜೀಮಾಳಿಗೆ ಕಾರ್ಕಳ ಕಾಬೆಟ್ಟಿನಲ್ಲಿ ಅಂಗಡಿಯೊಂದನ್ನು ಹೊಂದಿದ್ದು, 2021 ಎಪ್ರಿಲ್ 18ರಂದು ಆರೋಪಿತರಾದ ಇರ್ಫಾನ್, ಸಿರಾಜ್ ಭಾನು ಅಗಮಿಸಿ ಗಲಾಟೆ ಮಾಡಿ ನಜೀಮಾಳಿಗೆ ಹಾಗೂ ಅವರ ಮಗುವಿನ ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುತ್ತಾರೆ.