ಮೂಡುಬಿದಿರೆ, ಜೂ. 03 (DaijiworldNews/SM): ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಮಹಿಳೆ ಗುಲಾಬಿ ಎಂದು ಗುರುತಿಸಲಾಗಿದೆ.
ಮೇ 30ರಂದು ಜೈನಪೇಟೆಯ ಜೈನಮಠದ ತಿರುವಿನಲ್ಲಿ ಘಟನೆ ನಡೆದಿತ್ತು. ಹೆದ್ದಾರಿ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ರಿಕ್ಷಾ ಡಿಕ್ಕಿ ಹೊಡೆದು ನಿಲ್ಲಿಸದೆಪರಾರಿಯಾಗಿತ್ತು. ಈ ವೇಳೆ ಮಹಿಳೆಗೆ ರಸ್ತೆಯ ಪಕ್ಕಕ್ಕೆ ಎಸೆಯಲ್ಪಟ್ಟಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಹೆಚ್ಚಿನ ಜನರ ಸಂಚಾರವಿಲ್ಲದೆ, ತಕ್ಷಣಕ್ಕೆ ವಿಚಾರ ಬೆಳಕಿಗೆ ಬಂದಿರಲಿಲ್ಲ. ಅಲ್ಲದೆ ಮಳೆ ಕೂಡ ಸುರಿಯುತ್ತಿತ್ತು. ಘಟನೆಯಲ್ಲಿ ಮಹಿಳೆಯ ತಲೆಗೆ ಗಂಭೀರ ಸ್ವರೂಪ ಗಾಯಗಳಾಗಿತ್ತು.
ಅಲ್ಪ ಸಮಯದ ಬಳಿಕ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾ ಉಪಾಧ್ಯಕ್ಷ ಸಂಪತ್ ಪೂಜಾರಿ ನೆತ್ತೋಡಿ ಮಹಿಳೆಯನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ದಾಖಲಿಸಿದ್ದರು. ಸಿಸಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯಾವಳಿಯ ಆಧಾರದಲ್ಲಿ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲಾಗಿದೆ.