ಕುಂದಾಪುರ,ಜೂ 3 (DaijiworldNews/MS): ನಾಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನೇ ದಿನೇ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಕಾರಣ ಕಟ್ಟುನಿಟ್ಟಿನ ಲಾಕ್ಡೌನ್ ಮಾಡಲು ಗ್ರಾಮ ಪಂಚಾಯಿತಿ ನಿರ್ಧಾರ ಮಾಡಿದೆ. ಈಗಾಗಲೇ ಜಿಲ್ಲಾಧಿಕಾರಿಯವರು ಆದೇಶ ಮಾಡಿದ್ದು ಆ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಗ್ರಾಮ ಪಂಚಾಯಿತಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಭೇಟಿ ನೀಡಿದ್ದು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದರು.
ಮೇ 3ರಿಂದ 5 ದಿನಗಳ ಕಾಲ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಯಲ್ಲಿರಲಿದೆ. ಈಗಾಗಲೇ ನಾಡಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದಿನೇಶ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಕಲ ಸಿದ್ದತೆಗಳು ನೆಡೆದಿದೆ. ಅಧ್ಯಕ್ಷರು ಸೇರಿದಂತೆ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ ಹರೀಶ್ ಮೊಗವೀರ, ಮಾಜಿ ತಾ. ಪಂ ಸದಸ್ಯರಾದ ಪ್ರವೀಣಕುಮಾರ ಶೆಟ್ಟಿ, ಪಂಚಾಯಿತಿ ಸದಸ್ಯರಾದ ಶ್ರೀಧರ ದೇವಾಡಿಗ, ಪಂಚಾಯಿತಿ ಸಿಬ್ಬಂದಿ ಉದಯ ದೇವಾಡಿಗ, ಲೆಕ್ಕ ಸಹಾಯಕ ಲೋಕೇಶ, ಗಂಗೊಳ್ಳಿ ಪೊಲೀಸ್ ಠಾಣೆಯ ಹಸನ್, ಲಾಕ್ಡೌನ್ ಸಮೀಕ್ಷೆಗೆ ವಿಶೇಷ ತಂಡ ಸಿದ್ದವಾಗಿದೆ. ಗ್ರಾಮವಾಸಿಗಳು ಲಾಕ್ಡೌನ್ ಪ್ರಕ್ರಿಯೆಗೆ ಸಹಕರಿಸುತ್ತಿದ್ದು ಕೊರೊನಾ ತಡೆಗಟ್ಟುವಲ್ಲಿ ಸಹಕರಿಸುತ್ತಿದ್ದಾರೆ. ಈಗಾಗಲೇ ಹಾಲು ವಿತರಣೆಗೆ ಹಾಲು ಮಾರಾಟಗಾರರನ್ನೆ ನೇಮಿಸಲಾಗಿದ್ದು ಅವರೇ ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಅಲ್ಲದೆ ಅಗತ್ಯ ವಸ್ತುಗಳ ಪೂರೈಕೆಗೆ ತಂಡವನ್ನು ರಚಿಸಲಾಗಿದೆ. ನಾಡಾ ಪಂಚಾಯಿತಿ ವ್ಯಾಪ್ತಿಯ ನಾಡಾ ಹಡವು ಬಡಾಕೆರೆ ಮತ್ತು ಸೇನಾಪುರ ಗ್ರಾಮಗಳ ಸಂಪೂರ್ಣವಾಗಿ ಲಾಕ್ಡೌನ್ ಪ್ರಕ್ರಿಯೆಗೆ ಒಳಪಟ್ಟಿದ್ದು ವಿಶೇಷ ಸಮೀಕ್ಷಾ ತಂಡ ಆ ಭಾಗಗಳ ಗಡಿಯಲ್ಲಿ ಪ್ರವೇಶ ನಿಷೇದ ಸೂಚನೆಯನ್ನು ನೀಡಿದೆ.
ಶಾಸಕರ ಭೇಟಿ: ಬೈಂದೂರು ಕ್ಷೇತ್ರದ ಶಾಸಕರಾದ ಸುಕುಮಾರ ಶೆಟ್ಟಿಯವರು ಇಂದು ಭೇಟಿ ನೀಡಿದ್ದು ಟಾಸ್ಕಪೋರ್ಸ್ ಸಭೆಯನ್ನು ನೆಡೆಸಿದರು. ಈ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷರಾದ ದಿನೇಶ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರು, ಅಭಿವೃದ್ದಿ ಅಧಿಕಾರಿ ಹರೀಶ ಮೊಗವೀರ, ನಾಡಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಿಕ್ಮರಿ, ಗಂಗೊಳ್ಳಿ ಠಾಣೆಯ ಉಪನಿರೀಕ್ಷಕರಾದ ನಂಜನಾಯ್ಕ, ಪಂಚಾಯತ್ ಸಿಬ್ಬಂದಿಗಳಾದ ಲೊಕೇಶ, ಉದಯ ಪಡುಕೋಣೆ ಉಪಸ್ಥಿತರಿದ್ದರು.