ಮಂಗಳೂರು, ಜೂ 3 (DaijiworldNews/MS): ಕೊವಿಡ್ 3ನೇ ಅಲೆ ಮಕ್ಕಳಿಗೆ ಅಪಾಯಕಾರಿ ಎಂಬ ವರದಿಯ ನಡುವೆಯೇ ಈಗಾಗಲೇ ದ,ಕ. ಜಿಲ್ಲೆಯಲ್ಲಿ ಕೊವಿಡ್ನಿಂದ ತಂದೆ ಅಥವಾ ತಾಯಂದಿರನ್ನು ಕಳೆದುಕೊಂಡು ಓರ್ವ ಪಾಲಕರ ಪೋಷಣೆಯಲ್ಲಿ ಬೆಳೆಯಬೇಕಾದ ಸ್ಥಿತಿಯಲ್ಲಿ 29 ಮಕ್ಕಳಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಿಳಿಸಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18 ವರ್ಷದೊಳಗಿನ ಕೋವಿಡ್ ಬಾಧಿತ ಮತ್ತು ಸೋಂಕಿತ, ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡ ಅಥವಾ ಏಕಪೋಷಕ ಮಕ್ಕಳಿಗೆ ವಿಶೇಷವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಘಟಕದ ಮಾಹಿತಿಯಂತೆ ಕೋವಿಡ್ನಿಂದ ಇಬ್ಬರು ಪೋಷಕರನ್ನು ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳ ವರದಿಯಾಗಿಲ್ಲ . ಆದರೆ ಒಬ್ಬ ಪೋಷಕರನ್ನು ಕಳೆದುಕೊಂಡ 17 ಕುಟುಂಬಗಳಲ್ಲಿ 29 ಮಕ್ಕಳು ಏಕಪಾಲಕರಿದ್ದಾರೆ.
ಸದ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಕೋವಿಡ್-19ರ ಹರಡುವಿಕೆಯ ನಿಯಂತ್ರಣಕ್ಕಾಗಿ 18 ವರ್ಷದೊಳಗಿನ ರಕ್ಷಣೆ ಮತ್ತು ಪೋಷಣೆಗೆ ಒಳಗಾಗುವ ಮಕ್ಕಳಿಗೆ ವಸತಿ ನಿಲಯವನ್ನು ಒದಗಿಸುವುದಕ್ಕಾಗಿ ಸಾಮಾನ್ಯ ಕ್ವಾರಂಟೈನ್ ವ್ಯವಸ್ಥೆ ಮತ್ತು ಕೋವಿಡ್ ಸೋಂಕಿತ ಮಕ್ಕಳಿಗೆ ಪ್ರತ್ಯೇಕವಾದ ಕ್ವಾರಂಟೈನ್ ವ್ಯವಸ್ಥೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಸರ್ವೋಚ್ಚ ನ್ಯಾಯಾಲಯದ ಆದೇಶ :
2020ರ ಮಾರ್ಚ್1 ರಿಂದ ಇಲ್ಲಿಯವರೆಗೆ ಕೋವಿಡ್ನಿಂದ ಇಬ್ಬರೂ ಪೋಷಕರನ್ನು ಕಳೆದುಕೊಂಡ ಅನಾಥ ಮತ್ತು ಏಕಪೋಷಕ ಹಾಗೂ ಸೋಂಕಿತ/ಬಾಧಿತ ಮತ್ತು ಕೋವಿಡ್ನ್ನು ಹೊರತುಪಡಿಸಿ ಇನ್ನಿತರ ಕಾರಣದಿಂದ ಇಬ್ಬರೂ ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳ ಮತ್ತು ಏಕಪೋಷಕ ಮಕ್ಕಳ ಮಾಹಿತಿಯನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸಂಗ್ರಹಿಸಲಾಗುತ್ತಿದೆ.
ಅದ್ದರಿಂದ ಕೋವಿಡ್-19 ಸೋಂಕಿನಿಂದ , ತಂದೆ - ತಾಯಿಯರನ್ನು ಕಳೆದುಕೊಂಡ ಮತ್ತು ಏಕಪೋಷಕ ಹಾಗೂ ಪರಿತ್ಯಕ್ತ ಮಕ್ಕಳಿಗೆ ಆಹಾರ ಕಿಟ್ನ್ನು ಒದಗಿಸುವ ಬಗ್ಗೆ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಿದೆ.
ಅನಾಥ ಅಥವಾ ಏಕ ಪೋಷಕ ಮಕ್ಕಳ ಪಾಲನೆಗೆ ಸರ್ಕಾರ ಸಹಾಯಧನ:
ಇನ್ನು ಕೊರೊನಾದಿಂದ ಹೆತ್ತವರನ್ನು ಕಳೆದುಕೊಂಡ ಅನಾಥ ಅಥವಾ ಏಕ ಪೋಷಕ ಮಕ್ಕಳ ಪಾಲನೆಗೆ ಸರ್ಕಾರ ಸಹಾಯಧನ ನೀಡಲಿದ್ದು, ಮಕ್ಕಳಿಗೆ ನಿಯಮಾನುಸಾರ ಪ್ರಾಯೋಜಕತ್ವ ಯೋಜನೆಯಡಿಯಲ್ಲಿ ಧನಸಹಾಯ ಸೌಲಭ್ಯವನ್ನು ಒದಗಿಸುವ ಬಗ್ಗೆ ಪ್ರಗತಿಯಲ್ಲಿದೆ.
ಹೀಗಾಗಿ ಸಾರ್ವಜನಿಕರಲ್ಲಿ ಇಂತಹ ಮಕ್ಕಳ ಮಾಹಿತಿ ದೊರೆತಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂ.ಸಂ: 0824-2440004, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ:0824-2485401, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ:0824-2451254, ಎಲ್ಲಾ ಶಿಶು ಅಭಿವೃದ್ಧಿ ಯೋಜನೆ, ನಗರ(0824-2432809), ಗ್ರಾಮಾಂತರ (0824-2263199), ಬಂಟ್ವಾಳ (08255-232465), ವಿಟ್ಲ (08255-238080), ಪುತ್ತೂರು (08251-230388), ಬೆಳ್ತಂಗಡಿ (08256-232134), ಸುಳ್ಯ (08257-230239) ಅಥವಾ ಜಿಲ್ಲೆಯ ಚೈಲ್ಡ್ಲೈನ್-1098, ಇವರನ್ನು ಸಂಪರ್ಕಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.