ಮಂಗಳೂರು, ಜೂ 02 (DaijiworldNews/MS): ಅಕ್ರಮವಾಗಿ ಮನೆಗೆ ನುಗ್ಗಿ ಮಹಿಳೆಯ ಕೊಲೆಗೆ ಯತ್ನಿಸಿ ದಾಂಧಲೆ ನಡೆಸಿದ ಏಳು ಮಂದಿ ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಜೂ.2ರ ಬುಧವಾರ ಬಂಧಿಸಿದ್ದಾರೆ.
ಬಂಧಿತರನ್ನು ಕೊಡಿಕಲ್’ ನ ರಂಜಿತ್ (28), ಉರ್ವ ಸ್ಟೋರ್ ನ ಅವಿನಾಶ್ (23) ಮತ್ತು ಧನುಷ್ (19), ಕೊಟ್ಟಾರದ ಪ್ರಜ್ವಲ್ (24), ಕೋಡಿ ಬೆಂಗ್ರೆ ದೀಕ್ಷಿತ್ (21), ಬಂಟ್ವಾಳ ಸರಿಪಲ್ಲದ ದ ಹೇಮಂತ್ (19) ಮತ್ತು ಕುಂಜತ್ಬೈಲ್ ನ ಯತಿರಾಜ್ (23) ಎಂದು ಗುರುತಿಸಲಾಗಿದೆ.
ಬಂಧಿತರಲ್ಲಿ, ರಂಜಿತ್ ಮತ್ತು ಅವಿನಾಶ್ ರೌಡಿ-ಶೀಟರ್ ಗಳಾಗಿದ್ದು ಅವರ ವಿರುದ್ಧ ಕ್ರಮವಾಗಿ 10 ಮತ್ತು ಎರಡು ಪ್ರಕರಣಗಳಿವೆ. ಪ್ರಜ್ವಲ್ ಮತ್ತು ದೀಕ್ಷಿತ್ ಅವರ ವಿರುದ್ಧ ಕ್ರಮವಾಗಿ ಎರಡು ಮತ್ತು ಮೂರು ಪ್ರಕರಣಗಳನ್ನು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ.
ಹೇಮಂತ್ ಎಂಬಾತ 20 ವರ್ಷದ ಯುವತಿಗೆ ಕಿರುಕುಳ ನೀಡುತ್ತಿದ್ದು ಈ ಬಗ್ಗೆ ಅವನನ್ನು ಪ್ರಶ್ನಿಸಿದಾಗ, ಆತ ತನ್ನ ರೌಡಿ-ಶೀಟರ್ ಸ್ನೇಹಿತರೊಂದಿಗೆ ತಲವಾರು, ರಾಡ್, ಕೂಡಲಿ ಹಾಗೂ ಇನ್ನಿತರ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಶಕ್ತಿ ನಗರದಲ್ಲಿನ ಯುವತಿ ಮನೆಗೆ ರಾತ್ರಿ ಅಕ್ರಮವಾಗಿ ಪ್ರವೇಶಿಸಿ ತಾಯಿಯ ಮೇಲೆ ಹಲ್ಲೆ ನಡೆಸಿ , ಧಾಂದಲೆ ಮಾಡಿ ಟಿವಿ ಮಿಕ್ಸಿ ಸೋಪಾ ಇತ್ಯಾದಿ ಮನೆಯ ಸೊತ್ತುಗಳಿಗೆ ಹಾನಿ ಮಾಡಿದ್ದರು ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.