ಮಂಗಳೂರು, ಜೂ 02 (DaijiworldNews/MS): ಕೊರೊನಾ ನಿಯಂತ್ರಣಕ್ಕಾಗಿ ನೀಡಲಾಗುವ ಲಸಿಕೆಯಲ್ಲಿ ಬಿಜೆಪಿಯೂ ರಾಜಕೀಯ ಮಾಡುತ್ತಿದ್ದು, ಲಸಿಕೆಯೂ ಸೂಕ್ತ ಫಲಾನುಭವಿಗಳಿಗೆ ಲಭಿಸುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ನೂರು ಲಸಿಕೆ ಬಂದರೆ ಅದೇ ದಿನ ಸಂಜೆ 50 ಲಸಿಕೆಯೂ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಅವರ ಮನೆಗೆ ಹೋಗುತ್ತಿದೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮೇ.2 ರ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಹರೀಶ್ ಕುಮಾರ್, " ಲಸಿಕೆಯೂ ಶಾಸಕ ಮನೆ ತಲುಪುತ್ತಿದ್ದು ಬಿಜೆಪಿ ಕಾರ್ಯಕರ್ತರಿಗೆ ಮತ್ತು ಶಾಸಕರಿಗೆ ಬೇಕಾದವರಿಗಾಗಿ ಹಂಚಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಲಸಿಕಾ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರದ್ದೇ ದರ್ಬಾರ್ ನಡೆಸುತ್ತಿದ್ದು,ಲಸಿಕಾ ಟೋಕನ್ ನಲ್ಲಿ ಬಿಜೆಪಿಯ ಎಲ್ಲಾ ಶಾಸಕರು ಅವ್ಯವಹಾರ ನಡೆಸುತ್ತಿದ್ದಾರೆ. ಲಸಿಕಾ ಕೇಂದ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ನಿಂತೂ ಕೆಲಸ ಮಾಡುವ ಅಗತ್ಯತೆ ಇಲ್ಲ ಬದಲಾಗಿ ಅಧಿಕಾರಿಗಳಿಂದ ಲಸಿಕಾ ಕೇಂದ್ರದಲ್ಲಿ ಸಮರ್ಪಕ ಲಸಿಕಾ ವ್ಯವಸ್ಥೆ ಮಾಡಿಸಿ. ಒಂದು ವೇಳೆ ಸಿಬ್ಬಂದಿಗಳ ಕೊರತೆ ಇದ್ದರೆ ರಜೆಯಲ್ಲಿರುವ ಅಧಿಕಾರಿಗಳನ್ನು ನೇಮಿಸಲಿ. ಅದನ್ನು ಬಿಟ್ಟು ಸಿಬ್ಬಂದಿಗಳಿಲ್ಲವೆಂದು ಬಿಜೆಪಿ ಕಾರ್ಯಕರ್ತರು ಕೇಂದ್ರದಲ್ಲಿರುವುದು ಸರಿಯಲ್ಲ ಎಂದು ದೂಷಿಸಿದ್ದಾರೆ.
ದೇಶದಲ್ಲಿ ಮೋದಿ ಅಧಿಕಾರಕ್ಕೆ ಬಂದ್ರೆ ಭ್ರಷ್ಟರೆಲ್ಲ ಜೈಲು ಸೇರುತ್ತಾರೆ ಎಂದು ಘೋಷಿಸಿಕೊಂಡಿದ್ದರು ಆದರೆ ಅವರು ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟರೆಲ್ಲ ಬಿಜೆಪಿ ಸೇರ್ಪಡೆ ಆಗುತ್ತಿದ್ದಾರೆ. ಭ್ರಷ್ಟರಿಗೆಲ್ಲ ಬಿಜೆಪಿ ಪಕ್ಷವೇ ಜೈಲಾಗಿದೆ ಎಂದು ವ್ಯಂಗವಾಡಿದ್ದಾರೆ.