ಕಾಸರಗೋಡು, ಮೇ 31 (DaijiworldNews/SM): ಕೇರಳದಲ್ಲಿ ಜೂನ್ 1ರಿಂದ ನೂತನ ಶೈಕ್ಷಣಿಕ ವರ್ಷಾರಂಭಗೊಳ್ಳಲಿದ್ದು, ಆನ್ ಲೈನ್ ಮೂಲಕ ತರಗತಿಗಳು ನಡೆಯಲಿವೆ. ಪುಟಾಣಿಗಳು ಅಕ್ಷರ ಲೋಕಕ್ಕೆ ಕಾಲಿಡುವ ಈ ದಿನದಂದು ಶಾಲಾ ಪ್ರವೇಶೋತ್ಸವ ಆಯೋಜಿಸಲಾಗಿದ್ದು, ಆನ್ ಲೈನ್ ಮೂಲಕ ಕಾರ್ಯಕ್ರಮ ನಡೆಯಲಿದೆ.
ಕೊರೋನಾ ಹಾಗೂ ಲಾಕ್ ಡೌನ್ ಹಿನ್ನಲೆಯಲ್ಲಿ ಈ ವರ್ಷವೂ ಮನೆಗಳೇ ಮಕ್ಕಳಿಗೆ ತರಗತಿಯಾಗಿ ಪರಿವರ್ತನೆಗೊಂಡಿದೆ. ಪ್ರವೇಶೋತ್ಸವದಂಗವಾಗಿ ಮನೆ ಹಿತ್ತಿಲಿನಲ್ಲಿ ಮರವಾಗಿ ಬೆಳೆಯಬಲ್ಲ ಗಿಡ ನೀಡಲಾಗುತ್ತಿದ್ದು, 'ನೆನಪಿನ ಮರ' ಎಂದು ಹೆಸರಿಡಲಾಗಿದೆ.
"ನಮ್ಮ ನಾಳೆಗಳು ಪ್ರಕೃತಿ ಸಂರಕ್ಷಣೆಯೊಂದಿಗೆ" ಎಂಬ ಸಂಕಲ್ಪವನ್ನು ಶಾಲಾ ಪ್ರವೇಶೋತ್ಸವದ ಹಂತದಲ್ಲೇ ದೃಡೀಕರಿಸುವ ಮತ್ತು ಈ ಮೂಲಕ ಕೊರೋನಾದಂಥಾ ಮಹಾಮಾರಿಯನ್ನು ಜಾಗೃತಿಯಿಂದ ನಿಯಂತ್ರಿಸುವ ಉದ್ದೇಶವನ್ನು ಮಕ್ಕಳ ಮನಸ್ಸಿನಲ್ಲಿ ಬೇರೂರಿಸುವ ಲಕ್ಷ್ಯದೊಂದಿಗೆ ವಿಭಿನ್ನವಾಗಿ ಈ ಬಾರಿ ಈ ಸಮಾರಂಭ ಜರುಗಲಿದೆ.
"ನೆನಪಿನ ಮರ" ನೆಡುವ ಯೋಜನೆ ಈ ಬಾರಿಯ ಶಾಲಾ ಪ್ರವೇಶೋತ್ಸವದ ಗಮನಾರ್ಹ ಕಾರ್ಯಕ್ರಮವಾಗಿದೆ. ಮೊದಲ ಶಾಲಾ ಕಲಿಕೆಯ ನೆನಪಿನಲ್ಲಿ ಅಂಗನವಾಡಿ ಮಕ್ಕಳು ತಮ್ಮ ಒಂದನೇ ತರಗತಿ ಪ್ರವೇಶಿಸುವ ವೇಳೆ ತಮ್ಮ ಹಿತ್ತಿಲಲ್ಲೇ ಸಸಿ ನೆಡುವರು. ಇದರ ಚಿತ್ರ ಕ್ಲಿಕ್ಕಿಸಿ ಸಂಬಂಧಪಟ್ಟವರಿಗೆ ಕಳುಹಿಸುವಂತೆ ಆದೇಶಿಸಲಾಗಿದೆ. ರಾಜ್ಯ ಮಟ್ಟದಲ್ಲಿ, ಶಾಲಾ ಮಟ್ಟದಲ್ಲಿ, ತರಗತಿ ಮಟ್ಟದಲ್ಲಿ, ಮನೆಗಳ ಮಟ್ಟದಲ್ಲಿ ಶಾಲಾ ಪ್ರವೇಶೋತ್ಸವ ನಡೆಯಲಿರುವುದೂ ಈ ಬಾರಿಯ ಇನ್ನೊಂದು ವಿಶೇಷತೆಯಾಗಿದೆ.