ಬಂಟ್ವಾಳ, ಮೇ 31 (DaijiworldNews/SM): ಹಡಿಲು ಬಿದ್ದ ಭತ್ತ ಕೃಷಿ ಭೂಮಿಗೆ ಕಾಯಕಲ್ಪ ನೀಡುವ ಮಹತ್ವಾಕಾಂಕ್ಷೆಯ ಯೋಜನೆ ತಯಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಜಂಟಿಯಾಗಿ ಕೃಷಿಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ದ.ಕ.ಜಿಲ್ಲೆಯ ರೇಷನ್ ಕಾರ್ಡು ದಾರರಿಗೆ ಕೆಂಪು ಕಜೆ ನೀಡುವ ಬಗ್ಗೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಚಿಂತನೆ ನಡೆಸಿದ್ದಾರೆ. ಇದರ ಪೂರ್ವಭಾವಿಯಾಗಿ ಹಡಿಲು ಬಿದ್ದ ಭತ್ತ ಕೃಷಿ ಭೂಮಿಯನ್ನು ಗುರುತಿಸಿ ಕೃಷಿ ಮಾಡುವ ಉದ್ದೇಶದಿಂದ ಅಧಿಕಾರಿಗಳಿಂದ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಜೊತೆಗೆ ಶಾಸಕರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಮುಂಗಾರು ಮಳೆ ಆರಂಭವಾದ ಕೂಡಲೇ ಕರಾವಳಿಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳಬೇಕಾದ ಹಿನ್ನೆಲೆಯಲ್ಲಿ ಹಡಿಲು ಬಿದ್ದ ಭತ್ತ ಕೃಷಿ ಭೂಮಿಯನ್ನು ಹದಮಾಡಿ ನೇಜಿ ನೆಡುವ ಕಾರ್ಯಕ್ಕೆ ಸಕಲ ಸಿದ್ದತೆ ಮಾಡಲು ಯೋಜನೆ ರೂಪಿಸಲಾಯಿತು.
ಈಗಾಗಲೇ ಹಡಿಲು ಬಿದ್ದ ಕೃಷಿ ಭೂಮಿಯ ಗುರುತಿಸುವಿಕೆ ಕಾರ್ಯ ಈಗಾಗಲೇ ಮುಗಿದಿದ್ದು ಬಂಟ್ವಾಳ ತಾಲೂಕಿನಲ್ಲಿ ಒಟ್ಟು 400 ಎಕರೆ ಭತ್ತ ಕೃಷಿ ಭೂಮಿ ಹಡಿಲು ಬಿದ್ದಿದ್ದು ಅದರಲ್ಲಿ 160 ಎಕರೆ ಕೃಷಿಗೆ ಯೊಗ್ಯವಾಗಿದೆ. ಈ ಬಾರಿ 75 ಎಕರೆಯಲ್ಲಿ ಭತ್ತ ಕೃಷಿ ಮಾಡಲು ಯೋಜನೆ ಸಿದ್ದ ಮಾಡಿ ಎಂದು ಅಧಿಕಾರಿಗಳಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಆರಂಭಿಕ ಹಂತದಲ್ಲಿ ನರ್ಸರಿ ಕ್ರಮದ ಮೂಲಕ ಭತ್ತ ಕೃಷಿ ಚಟುವಟಿಕೆ ಮಾಡಲು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಸಿದ್ದತೆ ನಡೆಸಲಾಗಿದೆ ಎಂದು ಅವರು ತಿಳಿಸಿದರು. ಸಂಗಬೆಟ್ಟು ಗ್ರಾ.ಪಂ.ವ್ಯಾಪ್ತಿಯಲ್ಲಿ ಒಟ್ಟು 24 ಎಕರೆ ಭತ್ತ ಕೃಷಿ ಭೂಮಿ ಹಡಿಲು ಬಿದ್ದಿದ್ದು, ಸಿದ್ದಕಟ್ಟೆಯಲ್ಲಿ ಒಂದೇ ಕಡೆ 10 ಎಕರೆ ಇದೆ.
ಇಲ್ಲಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಪ್ರಭಾಕರ ಪ್ರಭು ಅವರ ಮುತುವರ್ಜಿಯಿಂದ ಬ್ಯಾಂಕ್ ಸಹಕಾರ ಹಾಗೂ ಕೃಷಿ ಇಲಾಖೆ ಜಂಟಿ ಸಹಕಾರದಿಂದ ಈಗಾಗಲೇ ಭತ್ತ ಕೃಷಿ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಮಾಹಿತಿ ನೀಡಿದರು.