ಪಡುಬಿದ್ರಿ, ಮೇ.31 (DaijiworldNews/HR): ಚಂಡಮಾರುತಕ್ಕೆ ಸಿಲುಕಿ ದುರಂತಕ್ಕೀಡಾಗಿ ಕಾಪು ತಾಲೂಕಿವ ಪಡುಬಿದ್ರಿ ಕಡಲ ತೀರಕ್ಕೆ ಕಳೆದ 15 ದಿನಗಳ ಹಿಂದೆ ಅಪ್ಪಳಿಸಿದ ಟಗ್ನ ಸ್ಥಳಾಂತರಕ್ಕೆ ಹಲವು ಸಂಕಷ್ಟಗಳು ಎದುರಾಗಿದ್ದು, ಇನ್ನೊಂದೆಡೆ ಸ್ಥಳಾಂತರ ವಿಳಂಬಕ್ಕೆ ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂಟು ಸಿಬ್ಬಂದಿಯಿದ್ದ ಎಮ್ಆರ್ಪಿಎಲ್ ಗುತ್ತಿಗೆ ಹೊಂದಿದ ಅಲಾಯನ್ಸ್ ಟಗ್ ದುರಂತಕ್ಕೀಡಾಗಿ ಪಡುಬಿದ್ರಿ ಕಡಲ ತೀರದಲ್ಲಿ ಮಗುಚಿ ಬಿದ್ದು 11 ದಿನಗಳ ಕಾರ್ಯಾಚರಣೆ ಬಳಿಕ ಹರಸಾಹಸ ನಡೆಸಿ ಮೇ 25 ರಂದು ಎತ್ತಿ ನಿಲ್ಲಿಸಲಾಗಿತ್ತು. ಈಗ ಅದರ ಸ್ಥಳಾಂತರಕ್ಕೆ ಮಂಗಳೂರು ಮತ್ತು ಮಲ್ಪೆ ಬಂದರು ಕಚೇರಿಗೆ ಪರವಾನಿಗೆ ಅರ್ಜಿ ಸಲ್ಲಿಸಲಾಗಿದೆ. ಸ್ಥಳಾಂತರ ಬಗ್ಗೆ ಐಆರ್ಎಸ್ ಸರ್ವೆ ಆಗಬೇಕಾಗಿದ್ದು, ಇನ್ನಷ್ಟು ವಿಳಂಬ ಸಾಧ್ಯತೆಯಿದೆ.
ಟಗ್ನೊಳಗಿದ್ದ ನೀರು ಮತ್ತು ಮರಳನ್ನು ಸಂಪೂರ್ಣ ತೆರವುಗೊಳಿಸಲಾಗಿದೆ. ಮತ್ತೆ ನೀರು ಒಳಗೆ ಹೋಗದಂತೆ ಬಾಗಿಲು ಸಹಿತ ರಂದ್ರಗಳನ್ನು ಮುಚ್ಚಲಾಗಿದೆ. ಮಳೆಗಾಲ ಪ್ರಾರಂಭವಾಗುವ ಮುನ್ನ ತೆರವು ಗೊಳಿಸಲು ಪ್ರಯತ್ನಿಸಲಾಗುವುದು. ಸ್ಥಳೀಯರು ಈ ತನಕ ಉತ್ತಮ ಸಹಕಾರ ನೀಡಿದ್ದಾರೆ. ಪೋಲೀಸ್ ಇಲಾಖೆ,ಜಿಲ್ಲಾಡಳಿತ ನಮ್ಮ ಯಾವುದೇ ಕೆಲಸಕ್ಕೆ ಅಡ್ಡಿ ಪಡಿಸದೆ ಉತ್ತಮ ಸಹಕಾರ ನೀಡಿದ್ದಾರೆ ಎಂದು ಬದ್ರಿಯಾ ಕಂಪನಿಯ ಪಾಲುದಾರ ಬಿಲಾಲ್ ಮೊಯ್ದಿನ್ ತಿಳಿಸಿದ್ದಾರೆ.
ಸ್ಥಳೀಯ ಸಮಾಜ ಸೇವಕಿ ವಿದ್ಯಾಶ್ರೀ ಈ ಟಗ್ ಜನನಿ ಭಿಡ ವಸತಿ ಪ್ರದೇಶದಲ್ಲಿದೆ, ಇದನ್ನು ತೆರವು ಗೊಳಿಸಲು ತಡವಾದಷ್ಟು ಮೀನಗಾರಿಕೆಗೆ ತೊಂದರೆ ಇದೆ. ಇದನ್ನ ವೀಕ್ಷಿಸಲು ಜನ ತಂಡೋಪತಂಡವಾಗಿ ಬರುತ್ತಾರೆ. ಕೊರೊನಾ ಸಂಧಿಗ್ದ ಪರಿಸ್ಥಿತಿ ಇರುವುದರಿಂದ ಆದಷ್ಟು ಬೇಗ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.