ಕಾರ್ಕಳ, ಮೇ.31 (DaijiworldNews/HR): "ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಿಂದೆಂದು ಕಂಡರಿಯದ ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಾಗಾಲೋಟವಾಗಿ ನಡೆಯುತ್ತಿದೆ. ಅದನ್ನು ಅರಗಿಸಿ ಕೊಳ್ಳಲು ಸಾಧ್ಯವಾಗದೇ ಇರುವ ಕಾಂಗ್ರೆಸ್ ಪಕ್ಷದ ಮುಖಂಡರು ಟೀಕೆಗಳನ್ನು ಮಾಡುವ ಮೂಲಕ ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯಾಗೊಂಡಿದೆ. ಯಾವೆಲ್ಲ ಅಭಿವೃದ್ಧಿ ಕಾಮಗಾರಿ ಕ್ಷೇತ್ರಕ್ಕೆ ಮಾರಕ ಎಂಬುವುದನ್ನು ಪಟ್ಟಿ ಸಿದ್ಧ ಪಡಿಸಿ ಅದನ್ನು ಜನಸಾಮಾನ್ಯರ ಮುಂದಿಡುವುದಕ್ಕೆ ಕಾಂಗ್ರೆಸ್ ಪಕ್ಷ ಮುಂದಾಗಬೇಕು. ಜನ ಅಭಿಪ್ರಾಯ ಪಡೆದುಕೊಂಡು ಅನಗತ್ಯ ಕಾಮಗಾರಿಯನ್ನು 'ಕೈ' ಬಿಡುವ ಕೆಲಸವನ್ನು ನಾವು ಮಾಡುತ್ತೇವೆ"ಎಂದು ಜಿ.ಪಂ ಸದಸ್ಯ ಉದಯ್ ಎಸ್. ಕೋಟ್ಯಾನ್ ಹೇಳಿದ್ದಾರೆ.
ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಕ್ಷೇತ್ರದ ಸರ್ವಾಗೀಣ ಅಭಿವೃದ್ಧಿಗೆ ಹಲವು ಯೋಜನೆಯನ್ನು ಅನುಷ್ಠಾನಗೊಳಿಸಲು ಶಾಸಕ ಮುತುವರ್ಜಿ ವಹಿಸಿದ್ದಾರೆ. ಅಗತ್ಯ ಕಾಮಗಾರಿಗಳನ್ನು ಅನಗತ್ಯ ಹೇಳಿಕೆ ನೀಡಿ ಜನರ ಮನಸ್ಸನ್ನು ದಿಕ್ಕೆಡಿಸುವ ಪ್ರಯತ್ನವನ್ನು ಕಾಂಗ್ರೆಸ್ ಮುಂದಾಗಿದೆ. ಕೊರೊನಾ ಸಂದರ್ಭ ಶಾಸಕರ ಮಾರ್ಗದರ್ಶನದಲ್ಲಿ ಸಂಸದರ ಸಹಕಾರಿಂದ ಜಿ.ಪಂ ಎಲ್ಲ ಸದಸ್ಯರುಗಳಾದ ನಾವು ಎಲ್ಲ ಜನಪ್ರತಿನಿಧಿಗಳ ಜತೆ ಸೇರಿ ಆರೋಗ್ಯ ಇಲಾಖೆ ಇತರೆ ಇಲಾಖೆಗಳ ಸಹಕಾರದಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡು ಕೊರೊನಾ ಪರೀಕ್ಷೆಯಿಂದ ತೊಡಗಿ ಗುಣಮುಖರಾಗುವ ತನಕವೂ ಕೆಲಸ ಮಾಡುತ್ತಿದ್ದೇವೆ" ಎಂದಿದ್ದಾರೆ.
ಅಂಬುಲೆನ್ಸ್, ಶವಸಂಸ್ಕಾರ, ಆಯುಷ್ಮನ್, ಕೊರೊನಾ ಹೆಲ್ತ್ ಕೇರ್ಗಳ ಜವಾಬ್ದಾರಿವಹಿಸಿಕೊಂಡಿದ್ದೇವೆ. ಬಜರಂಗದಳ, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕೂಡ ಕೈ ಜೋಡಿಸುತ್ತಿದ್ದಾರೆ. ಎಲ್ಲವೂ ಸಾಂಗವಾಗಿ ನಡೆಯುತ್ತಿರುವಾಗ ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ. ನಾಯಕರಿಲ್ಲದ ಮುಳುಗುದೋಣೆಯಂತಿರುವ ಕಾಂಗ್ರೆಸ್ ರಾಜಕೀಯ ಬಿಟ್ಟು ಕೊರೊನಾ ಮುಕ್ತರಾಗಲು ಸಹಕರಿಸುವಂತೆ ಮನವಿ ಮಾಡಿದರು.
ಜಿ.ಪಂ ಸದಸ್ಯರಾದ ಸುಮಿತ್ ಶೆಟ್ಟಿ ಕೌಡೂರು ಮಾತನಾಡಿ, "ಲಸಿಕೆ ವಿತರಣೆಯಲ್ಲಿ ಯಾವ ಹಸ್ತಕ್ಷೇಪವನ್ನು ಬಿಜೆಪಿ ಮಾಡುತಿಲ್ಲ. ಕಾಂಗ್ರೆಸ್ನ ಅಪಪ್ರಚಾರವಷ್ಟೆ. ಸರಕಾರದ ಪಟ್ಟಿಯಲ್ಲಿ ಗುರುತಿಸಿದವರು ಪಡೆದುಕೊಳ್ಳುತ್ತಿದ್ದಾರೆ" ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ದಿವ್ಯಾಶ್ರೀ ಅಮೀನ್, ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಕೋಟ್ಯಾನ್, ಹಿರ್ಗಾನ ಗ್ರಾ.ಪಂ ಅಧ್ಯಕ್ಷ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.