ಮಂಗಳೂರು / ಉಡುಪಿ, ಮೇ.31 (DaijiworldNews/HR): ಕೇರಳ ಕರಾವಳಿಗೆ ಮಾನ್ಸೂನ್ ಪ್ರವೇಶಿಸುವ ಸೂಚನೆ ಇರುವುದರಿಂದ ಹವಾಮಾನ ಇಲಾಖೆ ಜೂನ್ 1 ರಿಂದ ಕರಾವಳಿ ಕರ್ನಾಟಕದಲ್ಲಿ ಎಲ್ಲೋ ಅಲರ್ಟ್ ಪ್ರಕಟಿಸಿದ್ದು, ಜೂನ್ 1 ರ ಮಂಗಳವಾರದಿಂದ ಕರಾವಳಿಗೆ ಉತ್ತಮ ಮಳೆಯಾಗಬಹುದು ಎಂದು ಇಲಾಖೆ ತಿಳಿಸಿದೆ.
ಸಾಂಧರ್ಭಿಕ ಚಿತ್ರ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಮೇ 30 ರ ಭಾನುವಾರ ಉತ್ತಮ ಮಳೆಯಾಗಿದ್ದು, ದಿನವಿಡೀ ಮೋಡ ಕವಿದ ವಾತಾವರಣವಿತ್ತು.
ಭಾನುವಾರ ಗರಿಷ್ಠ 30.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಕನಿಷ್ಠ 22.6 ಡಿಗ್ರಿ ಸೆಲ್ಸಿಯಸ್ ಇತ್ತು. ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಮೋಡ ಮತ್ತು ಬಿಸಿಲಿನ ವಾತಾವರಣವನ್ನು ಹೊಂದಿದ್ದವು. ಆದರೆ ನಗರದ ಪಕ್ಕದ ಗ್ರಾಮೀಣ ಪ್ರದೇಶಗಳಿಗೆ ಭಾನುವಾರ ಉತ್ತಮ ಮಳೆಯಾಗಿದೆ.
ಬೆಳ್ತಂಗಡಿಯ ನವೂರ್ಗೆ 58 ಮಿ.ಮೀ ಮಳೆಯಾಗಿದೆ, ಅರಸಿನಮಕ್ಕಿ, ಶಿಶಿಲಾ, ಉಜಿರೆಯಲ್ಲಿ ಕೂಡ ಉತ್ತಮ ಮಳೆಯಾಗಿದ್ದು, ಕಡಬ, ಬಂಟ್ವಾಳ, ಪುತ್ತೂರು ಮತ್ತು ಮೂಡುಬಿದಿರೆ ತಾಲ್ಲೂಕುಗಳಲ್ಲಿ ಸಹ ಸಾಕಷ್ಟು ಪ್ರಮಾಣದ ಮಳೆಯಾಗಿದೆ.
ಇನ್ನು ಉಡುಪಿ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಮತ್ತು ಭಾನುವಾರದಂದು ಅನೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಬ್ರಹ್ಮಾವರ, ಕಾರ್ಕಳ ಮತ್ತು ಉಡುಪಿ ತಾಲ್ಲೂಕುಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ.