ಮಂಗಳೂರು, ಮೇ.31 (DaijiworldNews/HR): ತೊಕ್ಕೊಟ್ಟು ಬ್ಯಾಟರಿ ಅಂಗಡಿಯೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಸಂಭವಿಸಿದೆ.
ಕುಂಪಲ ನಿವಾಸಿ ಭರತ್ ಎಂಬವರಿಗೆ ಸೇರಿದ ಗೋಲ್ಡನ್ ಇಲೆಕ್ಟ್ರಿಕಲ್ಸ್ ಅಂಗಡಿ ಇದಾಗಿದ್ದು, ಇಂದು ಬೆಳಗ್ಗಿನ ಜಾವ ಅಂಗಡಿಗೆ ಆಗಮಿಸಿದ್ದ ಭರತ್ ಅವರು ದೇವರಿಗೆ ದೀಪ ಇಟ್ಟು ಬಳಿಕ ಲಾಕ್ಡೌನ್ ಹಿನ್ನೆಲೆಯಲ್ಲಿ ಅಂಗಡಿಗೆ ಶಟರ್ ಹಾಕಿ ತೆರಳಿದ್ದರು. ಆದರೆ ಸ್ವಲ್ಪ ಹೊತ್ತಿನಲ್ಲಿ ಅಂಗಡಿಯೊಳಗಿನಿಂದ ಹೊಗೆ ಕಾಣಿಸಿಕೊಂಡಿತ್ತು.
ಇನ್ನು ಇದನ್ನು ಗಮನಿಸಿದ ಸ್ಥಳೀಯರು ಶಟರ್ ಒಡೆದು ಒಳನೋಡಿದಾಗ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಸ್ಥಳೀಯರೆಲ್ಲರೂ ಸೇರಿಕೊಂಡು ನೀರು ಹಾಕಿ ನಂದಿಸಲು ಯತ್ನಿಸಿದರೂ ವಿಫಲವಾಯಿತು. ಬಳಿಕ ಯುವಕರ ತಂಡವೊಂದು ನೀರಿನ ಟ್ಯಾಂಕರ್ ಸ್ಥಳಕ್ಕೆ ಕರೆಯಿಸಿ ಅದರ ಮೂಲಕ ನೀರು ಹಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಅಗ್ನಿ ಶಾಮಕ ದಳಕ್ಕೆ ದೂರು ನೀಡಲಾದರೂ, ಮಂಗಳೂರಿನಿಂದ ತೊಕ್ಕೊಟ್ಟುವಿಗೆ ಆಗಮಿಸುವಷ್ಟರಲ್ಲಿ ಸ್ಥಳೀಯರು ಸೇರಿಕೊಂಡು ಬೆಂಕಿಯನ್ನು ನಂದಿಸಿ ಆಗಿತ್ತು.
ಇನ್ನು ಘಟನೆಗೆ ಕಾರಣ ತಿಳಿದುಬಂದಿಲ್ಲ.