ಕಾಪು, ಮೇ.31 (DaijiworldNews/HR): ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಕುರಾಲು ಜನವಸತಿ ಪ್ರದೇಶದಲ್ಲಿ ಜನರಿಗೆ ಭಯ ಹುಟ್ಟಿಸುತ್ತಿದ್ದ ಚಿರತೆಯೊಂದು ಭಾನುವಾರ ತಡರಾತ್ರಿ ಭೋನಿಗೆ ಬೀಳುವ ಮೂಲಕ ಈ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಕುರಾಲ್ ರೆನ್ನಿ ಕುಂದರ್ ಎಂಬವರ ಮನೆ ಬಳಿ ಚಿರತೆಯ ಓಡಾಟದ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಕರ್ಯೋನ್ಮುಖರಾಗಿ, ಚಿರತೆಯ ಭೇಟೆಗಾಗಿ ಭೋನನ್ನು ಇರಿಸಲಾಗಿತ್ತು. ನರಭಕ್ಷ ಚಿರತೆ ಆಹಾರದ ಭೇಟೆಯನ್ನು ಅರಸಿ ಬಂದು ಭೋನು ಸೇರುವ ಮೂಲಕ ಕಾರ್ಯಾಚರಣೆ ಯಶಸ್ಸು ಕಂಡಿದೆ.
ನಾಲ್ಕು ವರ್ಷ ಪ್ರಾಯದ ಗಂಡು ಚಿರತೆ ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ ಲೋಬೊ ಇವರ ಮಾರ್ಗ ದರ್ಶನ ದಲ್ಲಿ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿಗಳಾದ ಜೀವನ ದಾಸ ಶೆಟ್ಟಿ, ಗುರುರಾಜ್ ಕೆ. ಅರಣ್ಯ ರಕ್ಷಕರಾದ ಗುರುಪ್ರಸಾದ್, ಅಭಿಲಾಶ್ ಎಚ್. ಡಿ. ಮತ್ತು ಪರಶುರಾಮ ಮೇತಿ, ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬೋನಿನಲ್ಲಿ ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ.
ಭಾನುವಾರ ರಾತ್ರಿಯ ಸಮಯದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಚಿರತೆಯನ್ನು ರಾತ್ರಿಯೇ ಶಿರ್ವದ ಸರಕಾರಿ ವೈದ್ಯರಿಂದ ತಪಾಸಣೆ ನಡೆಸಿ ಕೊಲ್ಲೂರಿನ ಬಾಳೆಬರೆ ಘಾಟಿಯ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.