ವಿಟ್ಲ, ಮೇ 30 (DaijiworldNews/SM): ಮನೆ ನಿರ್ಮಾಣ ಮಾಡಿದ ವಿಚಾರವಾಗಿ ಹಿಂದು ಸಂಘಟನೆಯ ಇತ್ತಂಡದ ಮಧ್ಯೆ ಮಾರಾಮಾರಿ ನಡೆದ ಘಟನೆ ವಿಟ್ಲ ಸಮೀಪದ ಪೆರುವಾಯಿ ಎಂಬಲ್ಲಿ ನಡೆದಿದ್ದು, ಇತ್ತಂಡದವರು ಆಸ್ಪತ್ರೆಗೆ ದಾಖಲಾಗಿ ವಿಟ್ಲ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಘಟನೆಯಲ್ಲಿ ಗಾಯಗೊಂಡ ಒಂದು ತಂಡದ ಯತೀಶ್ ಮತ್ತು ಕಿರಣ್ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೊಂದು ತಂಡದ ಮುಳಿಯ ನಿವಾಸಿ ರಾಜೇಶ್ ಪುತ್ತೂರಿನ ಮತ್ತೊಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೆರುವಾಯಿ ಅಶ್ವಥನಗರ ನಿವಾಸಿ ಯತೀಶ್ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೆರುವಾಯಿ ಗ್ರಾಮದ ಪೆರುವಾಯಿ ಜಂಕ್ಷನ್ ಬಳಿ ಯತೀಶ್ ಮತ್ತು ಕಿರಣ್ ಕುಮಾರ್ ಅವರು ಇದ್ದಾಗ ಆರೋಪಿಗಳು ಬಂದು ಯತೀಶ ಮತ್ತು ಕಿರಣ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಜೀವ ಬೇದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಯತೀಶ್ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು ಹಣ ಸಂಗ್ರಹಿಸಿ ಅಶ್ವಥನಗರದ ಆಶ್ರಯ ಕಾಲೋನಿಯಲ್ಲಿ ನಾರಾಯಣ ಆಚಾರ್ಯರವರಿಗೆ ಮನೆ ಮಾಡಿಕೊಟ್ಟ ವಿಚಾರಕ್ಕೆ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಇಲ್ಲಿ ನೆರೆಯ ಮೋಹನ್ರವರ ಮನೆಗೆ ಹೋಗುವ ರಸ್ತೆಯ ಸಮಸ್ಯೆಗೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮತ್ತೊಂದೆಡೆ ಅಳಿಕೆ ಗ್ರಾಮದ ಮುಳಿಯ ನಿವಾಸಿ ರಾಜೇಶ್ ಅವರು ಗಾಯಗೊಂಡು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಯತೀಶ್ ಮತ್ತು ಇತರರ ವಿರುದ್ಧ ಪ್ರತಿದೂರು ನೀಡಿದ್ದಾರೆ. ಪರಿಶಿಷ್ಟ ಜಾರಿಯ ಕುಟುಂಬವೊಂದಕ್ಕೆ ಮುಸ್ಲಿಂ ಐಕ್ಯ ವೇದಿಕೆಯ ಸದಸ್ಯರು ಮನೆ ನಿರ್ಮಿಸಿಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಯತೀಶ್ ಹಾಗೂ ತಂಡದವರು ರಾಜೇಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿದೂರಿನಲ್ಲಿ ವಿವರಿಸಲಾಗಿದೆ.