ಉಡುಪಿ, ಮೇ 30 (DaijiworldNews/SM): ಜೂನ್ 7ರ ನಂತರ ಸಂಪೂರ್ಣ ಲಾಕ್ಡೌನ್ ಅಗತ್ಯ ಇಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 18-19 ಪರ್ಸೆಂಟ್ ಪಾಸಿಟಿವಿಟಿ ರೇಟ್ ಇದೆ. ಜೂನ್ 7ರ ಒಳಗೆ ಪಾಸಿಟಿವಿಟಿ ರೇಟ್ 10 ಆಗಬೇಕಿದೆ. ಪ್ರಸ್ತುತ ಸಾರ್ವಜನಿಕ ಓಡಾಟ, ಸಭೆ- ಸಮಾರಂಭ, ಕಾರ್ಯಕ್ರಮಗಳಿಗೆ ನಿರ್ಬಂಧವಿದೆ. ಮುಂದಿನ 3 ತಿಂಗಳು ಎಲ್ಲಾ ಸಭೆ ಸಮಾರಂಭಗಳಿಗೆ ನಿರ್ಬಂಧ ಹಾಕಬೇಕು ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಕೊರೊನಾದಿಂದ ಜನರ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಜಿಲ್ಲೆಯ ಜನತೆಯಲ್ಲಿ ಈಗ ರೋಗದ ಬಗ್ಗೆ ಜಾಗೃತಿ ಮೂಡಿದೆ. ಲಾಕ್ ಡೌನ್ ಮುಂದುವರೆಸಿದರೆ ಯಾವುದೇ ಪ್ರಯೋಜನವಿಲ್ಲ. ಪಾಸಿಟಿವಿಟಿ ರೇಟ್ ಹೆಚ್ಚು ಇದ್ದ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಲಿ. ಉಳಿದಂತೆ ಸೋಂಕು ನಿಯಂತ್ರಣದಲ್ಲಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಅನಗತ್ಯ ಎಂದು ಅವರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಲಾಕ್ ಡೌನ್ ತೆರವುಗೊಂಡ ಬಳಿಕ ಜನರು ಮುಗಿಯಿತು ಎಂದು ಮೈಮರೆಯಬಾರದು. ಎಚ್ಚರಿಕೆಯಿಂದ ವರ್ತಿಸಬೇಕಾಗಿದೆ. ಶೇಕಡ 70 ವ್ಯಾಕ್ಸಿನೇಷನ್ ಆಗುವವರೆಗೆ ಜನ ಬಹಳ ಜಾಗೃತಿಯಾಗಿರಬೇಕು ಎಂದು ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.