ಮಂಗಳೂರು, ಮೇ.30 (DaijiworldNews/HR): ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಸಂಸ್ಥೆಯು, ಈ ಬಾರಿಯ ಕೊರೊನಾ ಕಷ್ಟಕಾಲದಲ್ಲೂ ಪ್ರಜ್ಞಾವಂತಿಕೆ ಮೆರೆದಿದ್ದು, 600 ಕ್ಕೂ ಅಧಿಕ ಬಡಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸುತ್ತಿದೆ.
ಮಂಗಳೂರಿನ ಕಂಕನಾಡಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳ ಜೊತೆಯಲ್ಲಿ ವಿಶೇಷವಾಗಿ ಮಕ್ಕಳಹಕ್ಕು, ಕೌಟುಂಬಿಕ ದೌರ್ಜನ್ಯ ಹಾಗೂ ಸಮಾಜದಲ್ಲಿ ನಿರಂತರ ಕಿರುಕುಳಗಳಿಗೆ ತುತ್ತಾಗುತ್ತಿರುವ ಮಹಿಳೆಯರಿಗೆ ಸಾಂತ್ವನದ ಜೊತೆಗೆ, ಸಮಸ್ಯೆಗೆ ಪರಿಹಾರ, ನ್ಯಾಯ ದೊರಕಿಸಿಕೊಡುವ ಕಾರ್ಯವನ್ನು ನಡೆಸುತ್ತಿದೆ. ಸರಕಾರದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಮಾಜಮುಖಿಯಾಗಿ ಮುನ್ನಡೆಯುತ್ತಿದೆ.
ಪ್ರಸ್ತುತ ಸಂಸ್ಥೆಯು ಹೆಣ್ಣುಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಪ್ರವರ್ತನ ಯೋಜನೆಯಡಿಯಲ್ಲಿ ಕಿನ್ನಿಗೋಳಿ ವ್ಯಾಪ್ತಿಯನ್ನು ಕೇಂದ್ರವಾಗಿರಿಸಿಕೊಂಡು ಸುಮಾರು ಮೂರು ವರ್ಷಗಳಿಂದ ಆಸುಪಾಸಿನ 12 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಸುರಕ್ಷತೆ ಮತ್ತು ಅಭಿವೃದ್ಧಿಯನ್ನು ಧ್ಯೇಯವಾಗಿರಿಸಿಕೊಂಡು ಅನೇಕ ಜಾಗೃತಿ ಹಾಗೂ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.
ಸ್ಥಳೀಯ ಗ್ರಾಮ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಸಂಯೋಜನೆಯೊಂದಿಗೆ ಹತ್ತು ಹಲವು ಜಾಗೃತಿ ಆಧಾರಿತ ಕಾರ್ಯಕ್ರಮಗಳನ್ನು ನಿರ್ವಹಿಸುವುದರೊಂದಿಗೆ, ಇದೀಗ ಕೋವಿಡ್-19 ಲಾಕ್ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಸಮುದಾಯಗಳ ಬಡ ಮತ್ತು ಅರ್ಹ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುವುದರ ಜೊತೆಯಲ್ಲಿ, ಮಾಸ್ಕ್ ಧರಿಸುವ ಅವಶ್ಯಕತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಪ್ರಸ್ತುತ ಪ್ರಜ್ಞಾ ಸಂಸ್ಥೆಯು ಸುಮಾರು 12 ಗ್ರಾಮಪಂಚಾಯತ್ ವ್ಯಾಪ್ತಿಯ ಸುಮಾರು 600 ಅರ್ಹ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುವ ಪುಣ್ಯ ಕಾರ್ಯ ನಡೆಸುತ್ತಿದೆ.
ಹೆಣ್ಣುಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಪ್ರವರ್ತನ ಯೋಜನೆಯ ಸಂಯೋಜನಾಧಿಕಾರಿ ವಿಲಿಯಂ ಸ್ಯಾಮುವೆಲ್ ಅವರ ಮುತುವರ್ಜಿಯಲ್ಲಿ, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಅಭಿವೃದ್ಧಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಆಹಾರ ಕಿಟ್ ಹಾಗೂ ಮಾಸ್ಕ್ ಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ನಡೆಸಲಾಗುತ್ತಿದೆ. ಪ್ರಜ್ಞಾ ಸಂಸ್ಥೆಯ ಕಾರ್ಯ ಕ್ಷೇತ್ರಗಳನ್ನು ಹೊಂದಿರುವ ಕಿನ್ನಿಗೋಳಿ, ಮೆನ್ನಬೆಟ್ಟು, ಐಕಳ, ಕಲ್ಲಮುಂಡ್ಕೂರು, ತೆಂಕಮಿಜಾರು, ಎಕ್ಕಾರ್, ಕೆಮ್ರಾಲ್, ಪಡುಪಣಂಬೂರು, ಬಲ್ಕುಜೆ, ಅತಿಕಾರಿಬೆಟ್ಟು, ಕಿಲ್ಪಾಡಿ, ಮುಚ್ಚೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ.