ಸುಳ್ಯ, ಮೇ.30 (DaijiworldNews/HR): ಸುಳ್ಯದ ಜ್ಯುವೆಲ್ಲರಿ ಅಂಗಡಿಯಿಂದ ಇತ್ತಿಚೆಗೆ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅದರಲ್ಲಿಓರ್ವ ಕಳ್ಳನಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಆಸ್ಪತ್ರೆಗೆ ಕರೆದೊಯ್ಯಿದು ಸ್ಕ್ಯಾನ್ ಮಾಡಿದಾಗ ಆತನ ಕರುಳಿನಲ್ಲಿ ಚಿನ್ನದ ಸರ ಇರುವುದು ಪತ್ತೆಯಾಗಿದೆ.
ತಂಗಚ್ಚನ್ ಎಂಬ ಒಬ್ಬ ಆರೋಪಿಯನ್ನು ಶನಿವಾರ ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಇನ್ನೊಬ್ಬ ಆರೋಪಿ ಶಿಬು ಎಂಬಾತನ ಮೆಡಿಕಲ್ ಮಾಡಿಸಲು ಬಾಕಿ ಇದ್ದುದರಿಂದ ಭಾನುವಾರ ಹಾಜರುಪಡಿಸಲು ನಿರ್ಧರಿಸಲಾಗಿತ್ತು.
ಆರೋಪಿ ಶಿಬುಗೆ ಶನಿವಾರ ಸಂಜೆಯ ವೇಳೆಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಆತನನ್ನು ಸರ್ಕಾರಿ ಆಸ್ಪತ್ರೆಗೆ ಪೊಲೀಸರು ಕರೆದುಕೊಂಡು ಹೋದಾಗ ಆತನಿಗೆ ಹರ್ನಿಯಾ ಆಗಿರಬಹುದೆಂದು ಆಪರೇಶನ್ ಉದ್ದೇಶದಿಂದ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.
ಕೆವಿಜಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಸ್ಕ್ಯಾನ್ ಮಾಡಿದಾಗ ಕರುಳಿನಲ್ಲಿ ಚಿನ್ನದ ಸರ ಇರುವುದು ಗೊತ್ತಾಗಿದೆ ಎನ್ನಲಾಗಿದ್ದು, ಆಪರೇಶನ್ ಮಾಡಿ ಚಿನ್ನ ಹೊರತೆಗೆಯಲು ವೈದ್ಯರು ಕ್ರಮ ಕೈಗೊಂಡಿದ್ದಾರೆ.
ಇನ್ನು ಆರೋಪಿಯು ಚಿನ್ನವನ್ನು ಯಾವಾಗ ನುಂಗಿದ್ದಾನೆ ಎಂಬುದರ ಬಗ್ಗೆ ವಿಚಾರಣೆಯಿಂದ ತಿಳಿದುಬರಲಿದೆ.