ಉಡುಪಿ, ಮೇ.29 (DaijiworldNews/HR): ಜಿಲ್ಲೆಯ ಗ್ರಾಮ ಪಂಚಾಯತ್ಗಳಲ್ಲಿ ಕೊರೊನಾವನ್ನು ಸಂಪೂರ್ಣವಾಗಿ ಮುಕ್ತಗೊಳಿಸಿದಲ್ಲಿ, ಅಂತಹ ಗ್ರಾಮ ಪಂಚಾಯತ್ಗಳಲ್ಲಿ, ಅಭಿವೃಧ್ದಿ ಕಾರ್ಯಗಳನ್ನು ಕೈಗೊಳ್ಳಲು, ಹೆಚ್ಚಿನ ಅನುದಾನವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಿಡುಗಡೆ ಮಾಡಿಸಲಾಗುವುದು ಎಂದು ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ಕೊರೊನಾ ನಿಯಂತ್ರಣ ಕುರಿತು ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಗ್ರಾಮ ಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಸದಸ್ಯರುಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಸಂವಾದದ ಮೂಲಕ ಪ್ರಗತಿ ಪರಿಶೀಲನೆ ನಡೆಸಿದರು.
"ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಎಲ್ಲಾ 36 ಗ್ರಾ.ಪಂ.ಗಳ ಕಾರ್ಯಪಡೆಯ ಸದಸ್ಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದ ರೊಂದಿಗೆ ಕರೋನಾ ನಿಯಂತ್ರಣಕ್ಕೆ ತರಲು ಮುಂದಾಗಬೇಕು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿದಿನ ಸೋಂಕಿತರ ಮನೆಗಳಿಗೆ ಬೇಟಿ ನೀಡಿ, ಪಲ್ಸ್ ಆಕ್ಸಿಮೀಟರ್ ಮೂಲಕ ಅಕ್ಸಿಜಿನ್ ಪ್ರಮಾಣವನ್ನು ಪತ್ತೆ ಮಾಡುವುದರ ಜೊತೆಗೆ ಅವರ ಆರೋಗ್ಯ ಕ್ಷೇಮವನ್ನು ವಿಚಾರಿಸಬೇಕು" ಎಂದರು.
ತೀವ್ರತರದ ರೋಗ ಲಕ್ಷಣಗಳು ಕಂಡುಬಂದ ಕರೋನಾ ಪೀಡಿತರನ್ನು ತುರ್ತಾಗಿ ಆಸ್ಪತ್ರೆಗಳಿಗೆ ದಾಖಲಿಸುವ ಕಾರ್ಯವನ್ನು ಗ್ರಾಮೀಣ ಟಾಸ್ಕ್ಫೋರ್ಸ್ ಸದಸ್ಯರು ಮಾಡಬೇಕೆಂದು ಸೂಚನೆ ನೀಡಿದರು.
"ಪ್ರಧಾನಮಂತ್ರಿಗಳ ಆಶಯದಂತೆ ಹಾಗೂ ಮುಖ್ಯಮಂತ್ರಿಗಳ ಅಭಿಲಾಷೆಯಂತೆ, ಗ್ರಾಮೀಣ ಪ್ರದೇಶಗಳಲ್ಲಿ ಕೊರೋನ ನಿಯಂತ್ರಿಸಲು ಗ್ರಾ.ಪಂ. ಟಾಸ್ಕ್ ಫೋರ್ಸ್ ಗಳಿಂದ ಸಾಧ್ಯ. ಕೊರೋನಾ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡು, ಸೋಂಕು ನಿಯಂತ್ರಿಸುವ ಗೌರವಕ್ಕೆ ಪಾತ್ರವಾಗುವ ಪಂಚಾಯತ್ ಗಳಿಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಅಭಿವೃಧ್ದಿ ಕಾರ್ಯಗಳನ್ನು ಕೈಗೊಳ್ಳಲು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಸಲಾಗುವುದು" ಎಂದರು.
ಗ್ರಾಮೀಣ ಪ್ರದೇಶದಲ್ಲಿ ಸೋಂಕು ಕಂಡುಬರುವ ಮನೆಗಳನ್ನು ಸೀಲ್ಡೌನ್ ಮಾಡಬೇಕು ಎಂದ ಅವರು, ಸೋಂಕಿತರು ಮನೆಯಿಂದ ಹೊರಬಂದು ಸಾರ್ವಜನಿಕ ಸ್ಥಳ ಸೇರಿದಂತೆ ವಾಣಿಜ್ಯ ಕೇಂದ್ರಗಳಲ್ಲಿ ಸುತ್ತಾಡುವುದನ್ನು ನಿಯಂತ್ರಿಸಲು, ವ್ಯಕ್ತಿಯ ಗುರುತಿಗೆ ಕೈಗೆ ಸೀಲ್ ಹಾಕುವಂತೆ ಸೂಚನೆ ನೀಡಿದರು.
ಕಾರ್ಕಳ ಶಾಸಕ ಸುನೀಲ್ ಕುಮಾರ್ ಬೆಂಗಳೂರಿನ ತಮ್ಮ ಕಚೇರಿಯಿಂದ ವೀಡಿಯೋ ಸಂವಾದದಲ್ಲಿ ಭಾಗವಹಿಸಿ, ಎಲ್ಲಾ ಗ್ರಾಮ ಪಂಚಾಯತ್ಗಳಿಗೆ ತಮ್ಮ ಶಾಸಕರ ಅನುದಾನದಿಂದ, ಕಿಟ್ ಗಳು ಹಾಗೂ ಪಲ್ಸ್ ಆಕ್ಸಿಮೀಟರ್ಗಳನ್ನು ನೀಡಲಾಗುತ್ತಿದ್ದು ಇದರ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, "ಕೊರೊನಾ ನಿಯಂತ್ರಣಕ್ಕೆ ಅನೇಕ ಮಾಹಿತಿಯನ್ನು ಒದಗಿಸುವುದರ ಜೊತೆಗೆ, ಕೊರೊನಾ ನಿಯಂತ್ರಣಕ್ಕೆ ಸಂಬಂದಿಸಿದಂತೆ ಮಿಯಾರು ಗ್ರಾಮ ಪಂಚಾಯತ್ ನಲ್ಲಿ ಕೈಗೊಂಡಿರುವ ಕ್ರಮಗಳು ಅತ್ಯುತ್ತಮವಾಗಿದ್ದು, ಇದು ಎಲ್ಲಾ ಪಂಚಾಯತ್ ಗಳಿಗೆ ಮಾದರಿಯಾಗಿದೆ, ಇದನ್ನು ಎಲ್ಲಾ ಗ್ರಾ.ಪಂ. ಗಳು ಪಾಲಿಸಬೇಕು ಎಂದ ಅವರು, ಪಂ.ರಾಜ್ ಪ್ರತಿನಿಧಿಗಳು ಸಹಕಾರ ನೀಡಿ, ಎಲ್ಲರೂ ಕಟಿಬದ್ದವಾಗಿ ಕಾರ್ಯ ಮಾಡುವುದರ ಮೂಲಕ ಕೊರೊನಾ ನಿಯಂತ್ರಿಸಬೇಕು" ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಕರೋನ ಚುಚ್ಚುಮದ್ದು ನೀಡುವ ಕೇಂದ್ರಗಳಲ್ಲಿ ಜಾಗೃತಿ ವಹಿಸಿ, ಜನಜಂಗುಳಿ ಆಗದಂತೆ ನೋಡಿಕೊಳ್ಳಬೇಕು, ಪ್ರತಿದಿನ ಕೊರೀನಾ ನಿಯಂತ್ರಣಕ್ಕೆ ಯಾವುದೇ ಸಮಸ್ಯೆ ಉಂಟಾದಲ್ಲಿ ತಮ್ಮ ಅಥವಾ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಕಾರ್ಕಳ ಮತ್ತು ಹೆಬ್ರಿ ಗ್ರಾಮ ಪಂಚಾಯತ್ನ ಅಧ್ಯಕ್ಷರು, ಉಪಾಧ್ಯಕ್ಷರು, ಪಿ.ಡಿ.ಓಗಳು ಹಾಗೂ ಮತ್ತಿತರರು ಉಪಸ್ಥಿರಿದ್ದರು.