ಉಡುಪಿ, ಮೇ 29 (DaijiworldNews/SM): ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ 38% ದಿಂದ 19% ಕ್ಕೆ ಇಳಿಕೆಯಾಗಿದ್ದು, ಮುಂದಿನ ಒಂದುವಾರಗಳ ಕಾಲ ನಿರ್ಣಾಯಕವಾಗಲಿದ್ದು, ಜನರ ಸಹಕಾರ ಅತ್ಯಗತ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಈಗ ಉಡುಪಿಯಲ್ಲಿ ಆಕ್ಸಿಜನ್ ಬೆಡ್, ಐಸಿಯು ಬೆಡ್, ವೆಂಟಿಲೇಟರ್ಸ್ ಕೊರತೆ ಇಲ್ಲ. ಮೊದಲು 800 ರವರೆಗೆ ಆಕ್ಸಿಜನ್ ಸಿಲಿಂಡರ್ಸ್ ಬಳಕೆ ಆಗುತ್ತಿತ್ತು. ನಿನ್ನೆಗೆ 390 ಸಿಲಿಂಡರ್ಸ್ ಬಳಕೆ ಮಾಡಲಾಗಿದೆ. ಉಡುಪಿಯ ಜನರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಡಿಸಿ ಜಿ ಜಗದೀಶ್ ಹೇಳಿದ್ದಾರೆ.
ಜೂನ್ ೭ರೊಳಗೆ ಪಾಸಿಟಿವಿಟಿ ದರ 10% ಕ್ಕಿಂತ ಕೆಳಗೆ ಬರಬೇಕು. ಇದರ ಮೇಲೆ ಲಾಕ್ ಡೌನ್ ಭವಿಷ್ಯ ನಿಂತಿದೆ. ಮುಂದಿನ ಒಂದು ವಾರ ನಿರ್ಣಾಯಕವಾಗಲಿದೆ. ಮುಂದಿನ ಲಾಕ್ ಡೌನ್ ತಪ್ಪಿಸಬೇಕಾದರೆ ಜನರು ಲಾಕ್ ಡೌನ್ ನಿಯಮ ಪಾಲಿಸಬೇಕು. ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಂದು ಜನತೆಯಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿಕೊಂಡಿದ್ದಾರೆ.