ಮಂಗಳೂರು, ಮೇ 29 (DaijiworldNews/MS): "ಬಿಜೆಪಿ ಲಸಿಕೆ ಮಾಫಿಯಾ ನಡೆಸುತ್ತಿದ್ದು, 100 ಲಸಿಕೆ ಲಭ್ಯವಿದ್ದರೆ 70 ಸಾರ್ವಜನಿಕರಿಗೆ ಮತ್ತು 30 ಬಿಜೆಪಿ ಬೆಂಬಲಿಗರಿಗೆ ಮೀಸಲು " ಎಂದು ಮಾಜಿ ವಿಧಾನಾಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮೇ 29 ರ ಶನಿವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಶಾಸಕರು ಮತ್ತು ಸಂಸದರು ಉಚಿತ ಲಸಿಕೆ ನೀಡುವ ವಿಚಾರದಲ್ಲಿ ಮಾತನಾಡದೆ, ಬಂದಿರುವ ೧೦೦ ಡೋಸ್ ಲಸಿಕೆಯಲ್ಲಿ ತಮ್ಮ ಬೆಂಬಲಿಗರಿಗೆ ನೀಡಲು ಮಾತ್ರ ಶ್ರಮ ವಹಿಸುತ್ತಿರುವುದು ಲಸಿಕೆ ಕೇಂದ್ರಗಳಲ್ಲಿ ಕಂಡುಬರುತ್ತದೆ.
೧೦೦ ಡೋಸ್ ಲಸಿಕೆ ಪಡೆಯಲು ಬೆಳಗ್ಗಿನ ಜಾವ ೪ ಗಂಟೆಗೆ ೬೦೦ಜನ ಲಸಿಕೆ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ. ಇಂತಹ ಅವ್ಯವಸ್ಥೆಯಿಂದ ಕೂಡಿದ ಆಡಳಿತ ಜನರ ಪಾಲಿನ ಶಾಪವಾಗಿದೆ. 530 ಜನರನ್ನು ವಾಪಾಸ್ ಕಳುಹಿಸಿ , ಜನರೆಲ್ಲಾ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಖಾಲಿ ಮಾಡಿದ ನಂತರ, ಈ ಬಿಜೆಪಿ ಪ್ರತಿನಿಧಿಗಳು ತಮ್ಮ ಸಂಬಂಧಿಕರನ್ನು ಅಥವಾ ಅವರಿಗೆ ತಿಳಿದಿರುವ ವ್ಯಕ್ತಿಗಳನ್ನು ಲಸಿಕೆಗಾಗಿ ಕರೆತರುತ್ತಾರೆ. ಕೂಪನ್ 200 ರೂ.ಗೆ ವಾಮಂಜೂರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಅಂಶವೂ ಗಮನಕ್ಕೆ ಬಂದಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯ ಆಡಳಿತ ವೈಫಲ್ಯ, ಭ್ರಷ್ಟಚಾರದ ತಂತ್ರಗಳು, ಆರ್ಥಿಕವಾಗಿ ಹಿಂದುಳಿದವರ ಜೀವವನ್ನು ಬಲಿದಾನ ತೆಗೆದುಕೊಳ್ಳುತ್ತಿದೆ. ಇದನ್ನು ವಿರೋಧಿಸಿದರೆ ರಾಜಕೀಯ ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ
ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರದ ವತಿಯಿಂದ ನೀಡುವ ಲಸಿಕೆಗೆ ಸೇವಾಶುಲ್ಕ ೧೦೦ರಿಂದ ೨೦೦ಕ್ಕೆ ಏರಿಸಲಾಗಿದೆ, ಇದರ ಹಿಂದಿರುವ ತಂತ್ರವೇನು? ಕೊರೊನಾ ಸಂದರ್ಭದಲ್ಲಿ ಜನರಿಗೆ ಸೌಕರ್ಯ ಒದಗಿಸುವ ಹೊರತು ಅವರ ಮೇಲೆ ಹೆಚ್ಚಿನ ಆರ್ಥಿಕ ಒತ್ತಡ ಹಾಕುತ್ತಿರುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.