ಕಾರ್ಕಳ, ಮೇ 29 (DaijiworldNews/MS): ಕೊರೊನಾ ಸಾಂಕ್ರಾಮಿಕತೆಯನ್ನೇ ಬಂಡವಾಳ ಮಾಡಿಕೊಂಡು ಕೋವಿಡ್ ಲಸಿಕೆ ನೀಡಿಕೆಯ ಹೆಸರಲ್ಲಿ ಬಿಜೆಪಿ ತನ್ನ ಸ್ವಜನ ಹಿತಾಸಕ್ತಿಯ ಅಪರ ರಾಜಕೀಯದ ಮೂಲಕ ಜನ ಸಾಮಾನ್ಯರನ್ನು ವಂಚಿಸುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಕೋವಿಡ್ ನಿಗ್ರಹಿಸುವಲ್ಲಿ ಉಡುಪಿ ಜಿಲ್ಲಾಧಿಕಾರಿಯವರ ಸಮರ್ಥ ಕಾರ್ಯನಿರ್ವಹಣೆಯ ಕಣ್ಗಾವಲಿನ ಹೊರತಾಗಿಯೂ ಜಿಲ್ಲೆಯಾದ್ಯಂತ ಕೊರೋನಾ ಟಾಸ್ಕ ಫೋಸ್೯ ಸಮಿತಿ ಸದಸ್ಯರು ಎನ್ನಲಾದ ಬಿಜೆಪಿ ಕಾರ್ಯಕರ್ತರು ಪಕ್ಷದ ನಾಯಕರ, ಜನಪ್ರತಿನಿಧಿಗಳ ಲೆಟರ್ ಹೆಡ್, ಶಿಪಾರಸು ಪತ್ರ ಬಳಸಿಕೊಂಡು ಲಸಿಕೆ ಕೇಂದ್ರದ ನಿಯಮಾವಳಿಗಳನ್ನು ಗಾಳಿಗೆ ತೂರಿ, ಸಂಬಂದ ಪಟ್ಟ ವಾರಿಯರ್ಸ್ ಗಳ ಮೇಲೆ ಒತ್ತಡ ಹೇರಿ ತಮ್ಮವರಿಗೆ ಲಸಿಕೆ ನೀಡಿಸುತ್ತಿರುವ ಬಗ್ಗೆ ಜನಸಾಮಾನ್ಯರು ಈಗಾಗಲೇ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದು, ಆರೋಗ್ಯ ತುರ್ತುಸ್ಥಿತಿಯ ಈ ದುರಂತ ಸನ್ನಿವೇಶವನ್ನು ತಮ್ಮವರ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಬಿಜೆಪಿಯ ಈ ಅಮಾನವೀಯ ನಡೆಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದಿದ್ದಾರೆ.
ಇಂತಹ ಪ್ರಕರಣಗಳು ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ಕೇಳಿ ಬರುತ್ತಿದ್ದು, ಕಾರ್ಕಳ ನಗರ ವ್ಯಾಪ್ತಿಯ ಲಸಿಕಾ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರು ಎನ್ನಲಾದ ಮಂದಿ, ಕೊರೋನಾ ವಾರಿಯಸ್೯ಗಳು ಮಾಡ ಬೇಕಾದ ಕೆಲಸವನ್ನು ತಾವೇ ಮಧ್ಯ ಪ್ರವೇಶಿಸಿ ಅನಧಿಕೃತವಾಗಿ ಮಾಡುತ್ತಿರುವುದು ಹಾಗೂ ತಮ್ಮವರ ಆಧಾರ ಕಾಡ್ ಬಳಸಿ ಲಸಿಕೆ ಬುಕ್ಕಿಂಗ್ ಮಾಡುತ್ತಿರುವುದು ಇದಕ್ಕೊಂದು ಉದಾಹರಣೆಯಾಗಿದೆ ಎಂದಿದ್ದಾರೆ.
ಜಿಲ್ಲಾಡಳಿತ ಈ ಬಗ್ಗೆ ಮಧ್ಯ ಪ್ರವೇಶಿಸಿ ,ಜನತೆಯ ಹಿತದೃಷ್ಠಿಯಿಂದ ಜಿಲ್ಲೆಯ ಎಲ್ಲ ಟಾಸ್ಕ್ ಫೋಸ್೯ ಸಮಿತಿಗಳನ್ನು ಬರ್ಕಾಸುಗೊಳಿಸಿ, ಎಲ್ಲ ರಾಜಕೀಯ ಪಕ್ಷಗಳ ಗ್ರಾಮ ಪಂಚಾಯತು ಸದಸ್ಯರು, ತಾ.ಪಂ.ಸದಸ್ಯರು, ಜಿ.ಪಂ. ಸದಸ್ಯರು ಹಾಗೂ ಮಾಜಿ ಜನಪ್ರತಿನಿಧಿ ಗಳನ್ನೊಳಗೊಂಡ ಹೊಸ ಸಮಿತಿಯನ್ನು ರಚಿಸ ಬೇಕಾದುದು ಇಂದಿನ ಆದ್ಯತೆಯಾಗಿದೆ ಅವರು ತನ್ನ ಹೇಳಿಕೆಯಲ್ಲಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.