ಉಡುಪಿ, ಮೇ 28 (DaijiworldNews/SM):ಜಿಲ್ಲೆಯಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಯಾವುದೇ ಮೈಕ್ರೋಫೈನಾನ್ಸ್ ಗಳು, ಸಹಕಾರಿ ಸಂಘಗಳು, ಇತರೆ ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿದಾರರು, ಮನೆ ಮನೆಗೆ ಭೇಟಿ ನೀಡುವುದನ್ನು ಜೂನ್ 6 ರವರೆಗೆ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ತಡೆಗಟ್ಟಲು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ತಡೆಯುವುದು ಅವಶ್ಯವಕವಾಗಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಅವಶ್ಯಕ ಚಟುವಟಿಕೆಗಳನ್ನು ಹೊರತು ಪಡಿಸಿ, ಇತರೆ ಉದ್ದೇಶಗಳಿಗೆ ಸಾರ್ವಜನಿಕರ ಸಂಚಾರವನ್ನು ನಿರ್ಬಂಧವಿದೆ.
ಈ ಸಮಯದಲ್ಲಿ ಯಾವುದೇ ಮೈಕ್ರೋಫೈನಾನ್ಸ್ ಗಳು, ಸಹಕಾರಿ ಸಂಘಗಳು, ಇತರೆ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಸಾಲ ಮರು ಪಾವತಿ ಮಾಡಲು ಒತ್ತಡ ಹೇರುವಂತಿಲ್ಲ. ಒಂದೊಮ್ಮೆ ಸಾಲ ಮರುಪಾವತಿ ಮಾಡಲು ಒತ್ತಡ ಹೇರಿದ್ದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಲು ನೋಡೆಲ್ ಅಧಿಕಾರಿಗಳನ್ನಾಗಿ, ಲೀಡ್ ಜಿಲ್ಲಾ ಮ್ಯಾನೆಜರ್ ರುದ್ರೇಶ್ ಡಿ.ಸಿ(9449860858), ಸಹಕಾರ ಸಂಘಗಳ ಉಪನಿಬಂಧಕರಾದ ಪ್ರವೀಣ್ ಬಿ.ನಾಯಕ್(9448633338) ಇವರನ್ನು ನೇಮಿಸಲಾಗಿದೆ.
ಈ ನೋಡೆಲ್ ಅಧಿಕಾರಿಗಳು ಸಾರ್ವಜನಿಕರಿಂದ ಸ್ವೀಕೃತವಾದ ಸಾಲ ಮರುಪಾವತಿ ಕುರಿತು ದೂರುಗಳಿಗೆ ತಕ್ಷಣವೇ ಸ್ಪಂದಿಸಲಿದ್ದಾರೆ.