Karavali
ಮಂಗಳೂರು: 'ಬಿಜೆಪಿಯಿಂದ ನಮಗೆ ಸಮಾಜ ಸೇವೆ ಪಾಠದ ಅಗತ್ಯವಿಲ್ಲ' - ಹರೀಶ್ ಕುಮಾರ್
- Fri, May 28 2021 06:11:06 PM
-
ಮಂಗಳೂರು, ಮೇ.28 (DaijiworldNews/PY): "ಸರಿಯಾಗಿ ಆಡಳಿತ ಮಾಡಲು, ಜನರ ಸಮಸ್ಯೆಗೆ ಸ್ಪಂದಿಸಲು ಬಿಜೆಪಿಗೆ ಸೋಮಾರಿತನ ಕಾಡುತ್ತಿದೆ. ಅದನ್ನು ಕೊರೊನಾ ವಿಪತ್ತಿನ ನಿರ್ವಹಣೆ ಸಾಬೀತು ಮಾಡಿದೆ. ನಮ್ಮ ಪಕ್ಷ ಇರುವುದೇ ಸಮಾಜ ಸೇವೆಗೆ ಬಿಜೆಪಿ ಜಿಲ್ಲಾಧ್ಯಕ್ಷರಿಂದ ನಮಗೆ ಸಮಾಜ ಸೇವೆಯ ಪಾಠ ಅಗತ್ಯ ಇಲ್ಲ" ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, "ಕೊರೊನಾ ಸಂದರ್ಭದಲ್ಲಿ ದ.ಕ ಜಿಲ್ಲೆಯ ಜನರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದನ್ನು ನಾವು ಜನರ ಪರವಾಗಿ ಸ್ಪಷ್ಟವಾಗಿ ಮಾಧ್ಯಮದಲ್ಲಿ ಗಟ್ಟಿ ಧ್ವನಿಯಲ್ಲಿ ಹೇಳಿದ್ದೇವೆ. ಜನರ ಸಮಸ್ಯೆಯನ್ನು ನಾವು ಹೇಳಿದಾಗ, ಅದನ್ನು ಹಾದಿ ತಪ್ಪಿಸುವ ವಿಷಯವೆಂದು ಬಿಜೆಪಿಯವರು ಹೇಳುತ್ತಿರುವುದು ನಾಚಿಕೆಗೇಡು" ಎಂದಿದ್ದಾರೆ.
"ಬಿಜೆಪಿಯವರಿಗೆ ಜನರ ಸಮಸ್ಯೆ ಬೇಡ, ಅವರು ಇಮೇಜ್ ಉಳಿಸುವ ಸರ್ಕಸ್ ಮಾಡುತ್ತಿದ್ದಾರೆ. ಅದನ್ನು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ಜನತೆಯ ಮುಂದೆ ಇಟ್ಟಿದ್ದೇವೆ. ಅದು ಬಿಜೆಪಿಯವರಿಗೆ ಚಡಪಡಿಕೆ ಉಂಟು ಮಾಡಿರುವುದು ಅವರ ರಾಜಕೀಯ ದಿವಾಳಿತನವನ್ನು ಸಾರುತ್ತದೆ. ಬಿಜೆಪಿ ಜಿಲ್ಲೆಯಲ್ಲಿ ಕೊರೊನಾ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸದೇ, ಪ್ರತಿ ಪಕ್ಷಗಳನ್ನು ಟೀಕೆ ಮಾಡುತ್ತಿರುವುದು ಅದು ಆಡಳಿತ ಮಾಡಲು ಅಸಮರ್ಥ ಎಂದು ತೋರ್ಪಡಿಸಿದೆ" ಎಂದಿದ್ದಾರೆ.
"ಜಿಲ್ಲಾ ಕಾಂಗ್ರೆಸ್ ಆಡಳಿತ ಪಕ್ಷಕ್ಕಿಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಅದಕ್ಕೆ ನಾವು ಮಾಡಿದ ಕೆಲಸಗಳೇ ಸಾಕ್ಷ್ಯ ನುಡಿಯುತ್ತವೆ. ಜಿಲ್ಲೆಯ 8 ಎಲ್ಲಾ ವಿಧಾನಸಭಾ ವ್ಯಾಪ್ತಿಯಲ್ಲಿ 16 ಬ್ಲಾಕ್ಗಳು ಹಾಗೂ ಮುಂಚೂಣಿ ಘಟಕಗಳು ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 24×7 ವಾರ್ ರೂಮ್, ಕೊರೊನಾ ಟಾಸ್ಕ್ ಫೋರ್ಸ್ ಕಮಿಟಿ ಅಡಿಯಲ್ಲಿ ತೊಂದರೆಗೆ ಒಳಗಾದ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ನಾವು ಸಮರೋಪಾದಿಯಲ್ಲಿ ಮಾಡಿದ್ದೇವೆ. ಒಂದು ಕೊರೊನಾ ಸೋಂಕಿತರು ಮೃತಪಟ್ಟ ಸಂದರ್ಭ ಪಕ್ಷದಲ್ಲಿ ಶವಸಂಸ್ಕಾರದ ಕೆಲಸವನ್ನ ಪಕ್ಷದ ಕಾರ್ಯಕರ್ತರು ನಿಸ್ವಾರ್ಥವಾಗಿ ನೆರವೇರಿಸಿದ್ದಾರೆ" ಎಂದು ತಿಳಿಸಿದ್ದಾರೆ.
"ವೇದವ್ಯಾಸ್ ಕಾಮತ್ ಟೀಕೆಯಲ್ಲೂ ರಾಜಧರ್ಮ ಎಂದು ಹೇಳಿದ್ದಾರೆ. ಬಿಜೆಪಿಯವರ ತಪ್ಪುಗಳನ್ನು ಜನರ ನೋವುಗಳನ್ನು ಮಾಧ್ಯಮದ ಮುಂದೆ ಹೇಳದೆ, ನಾವು ಮುಚ್ಚಿಡಬೇಕಾಗಿತ್ತಾ? ಅದು ರಾಜಧರ್ಮವೇ? ನಾವು ರಾಜಕೀಯ ನಡೆಸಿಲ್ಲ. ನಾವು ಸಮರ್ಥ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸದೆ ಇದ್ದರೆ, ಬಿಜೆಪಿ ಏನು ಮಾಡುತ್ತಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಸರಿಯಾಗಿ ಆಡಳಿತ ಮಾಡಲು, ಜನರ ಸಮಸ್ಯೆಗೆ ಸ್ಪಂದಿಸಲು ಬಿಜೆಪಿಗೆ ಸೋಮಾರಿತನ ಕಾಡುತ್ತಿದೆ. ಅದನ್ನು ಕೊರೊನಾ ವಿಪತ್ತಿನ ನಿರ್ವಹಣೆ ಸಾಬೀತು ಮಾಡಿದೆ. ನಮ್ಮ ಪಕ್ಷ ಇರುವುದೇ ಸಮಾಜ ಸೇವೆಗೆ ಬಿಜೆಪಿ ಜಿಲ್ಲಾಧ್ಯಕ್ಷರಿಂದ ನಮಗೆ ಸಮಾಜ ಸೇವೆಯ ಪಾಠ ಅಗತ್ಯ ಇಲ್ಲ" ಎಂದು ಕಿಡಿಕಾರಿದ್ದಾರೆ.
"ದ.ಕ.ಜಿಲ್ಲೆಯಲ್ಲಿ ಮೊದಲಿಗೆ ಎಷ್ಟು ಜನರಿಗೆ ಲಸಿಕೆ ನೀಡಿದ್ದಾರೆ ಎಂದು ಬಿಜೆಪಿ ಬಹಿರಂಗ ಪಡಿಸಲಿ. ಅದು ಬಿಟ್ಟು ಕೀಳು ಮಟ್ಟದ ರಾಜಕೀಯ ಹೇಳಿಕೆ ನೀಡುವುದನ್ನು ಬಿಜೆಪಿ ಮೊದಲು ನಿಲ್ಲಿಸಲಿ. ಇವರು ಲಸಿಕೆಗೆ ಆದ್ಯತೆ ನೀಡುವ ಬದಲು ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
"ಜಿಲ್ಲಾ ಉಸ್ತುವಾರಿ ಸಚಿವರಾಗಿ ರಮಾನಾಥ ರೈ ಇದ್ದ ಸಂದರ್ಭ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್ ಅವರು ಏನು ಜನಪರ ಕಾರ್ಯ ಮಾಡಿದ್ದಾರೆ ಎಂಬುದು ರಾಜ್ಯದ ಜನರಿಗೆ ತಿಳಿದಿದೆ. ಆದರೆ, ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕರಿಗೆ ಮತ್ತು ಬಿಜೆಪಿ ಮುಖಂಡರಿಗೆ ಗೊತ್ತಿಲ್ಲ ಎಂದರೆ ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದೇ ಇವರಿಗೆ ಗೊತ್ತಿಲ್ಲ. ಮಂಗಳೂರಿನ ಲೇಡಿಗೋಶನ್ ಮತ್ತು ವೆನ್ಲಾಜ್ ಸರಕಾರಿ ಆಸ್ಪತ್ರೆಗೆ ಮಾನ್ಯ ಶಾಸಕರು, ಜಿಲ್ಲಾ ಬಿಜೆಪಿ ಅಧ್ಯಕ್ಷರು ಅವರದೇ ಪಕ್ಷದ ಮಾಜಿ ಶಾಸಕ ಎನ್.ಯೋಗೀಶ್ ಭಟ್ ಅವರೊಂದಿಗೆ ಒಂದು ರೌಂಡ್ ಹೋಗಿ ವೀಕ್ಷಿಸಿದಾಗ ಏನೆಲ್ಲಾ ಬದಲಾವಣೆ ಆಗಿದೆ ಎಂದು ಚೆನ್ನಾಗಿ ತಿಳಿದುಕೊಳ್ಳಬಹುದು" ಎಂದಿದ್ದಾರೆ.
"ರಾಜ್ಯ ಮಟ್ಟದಲ್ಲಿ ಖಾದರ್ ಅವಧಿಯಲ್ಲಿ 108 ಆಂಬ್ಯುಲೆನ್ಸ್ 200-800 ಆಂಬ್ಯುಲೆನ್ಸ್ ತನಕ ಹೆಚ್ಚಿಸಲಾಗಿತ್ತು. ದೇಶದಲ್ಲೇ ಮೊದಲ ಬಾರಿಗೆ ಬೈಕ್ ಆಂಬ್ಯುಲೆನ್ಸ್ ಆರಂಭಿಸಿದ್ದರು. ಇದಾದ ಬಳಿಕ ಬಿಜೆಪಿ ಸರಕಾರಕ್ಕೆ ಒಂದೇ ಒಂದು ಆಂಬ್ಯುಲೆನ್ಸ್ ಖರೀದಿಸಲಿಲ್ಲ ಏಕೆ? . ಇದಕ್ಕೆ ಬಿಜೆಪಿ ಮುಖಂಡರು ಉತ್ತರಿಸಬೇಕು" ಎಂದು ಆಗ್ರಹಿಸಿದ್ದಾರೆ.
"ನಮ್ಮ ಜಿಲ್ಲೆಯಲ್ಲಿ ವೆನ್ಲಾಕ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಹೊಸ ಕಟ್ಟಡ ಮತ್ತು ಇದೀಗ ಕೊರೊನಾಗೆ ನೀಡಲಾದ ಆಯುಷ್ ಆಸ್ಪತ್ರೆ ಕಟ್ಟಡ, ಕೊಕ್ಕಡ, ಕಡಬ, ಉಪ್ಪಿನಂಗಡಿ ಆಸ್ಪತ್ರೆಗಳಿಗೆ ಹೊಸ ಕಟ್ಟಡ, ವೈದ್ಯಕೀಯ ಉಪಕರಣಗಳು ರಾಜ್ಯದಲ್ಲಿ ಅನೇಕ ಆರೋಗ್ಯ ಕೇಂದ್ರಗಳ ಕಟ್ಟಡ ಹೊಸದಾಗಿ ಕಟ್ಟಲಾಗಿದೆ. ಯಾವುದೇ ಆಲೋಪಥಿ ಆಸ್ಪತ್ರೆ ಆವರಣದಲ್ಲಿ ಆಯುಷ್ ಆಯುರ್ವೇದಿಕ್ ಆಸ್ಪತ್ರೆ ಇಲ್ಲ. ಮಂಗಳೂರಿನಲ್ಲಿ ಖಾದರ್ ಅವರು ಮೊದಲ ಬಾರಿಗೆ ಆಯುರ್ವೇದ ಆಸ್ಪತ್ರೆಯನ್ನು ಆಲೋಪಥಿ ಆಸ್ಪತ್ರೆ ಆವರಣದಲ್ಲೇ ಆರಂಭಿಸಿದ್ದಾರೆ. ಉಳ್ಳಾಲದಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಯುರ್ವೇದ, ಆಯುಷ್ ಎಲ್ಲಾ ಸೌಕರ್ಯಗಳುಲ್ಲ ಆಸ್ಪತ್ರೆ ನಿರ್ಮಿಸಿದ್ದಾರೆ" ಎಂದು ತಿಳಿಸಿದ್ದಾರೆ.
"ಮಂಗಳೂರಿನ ಎಲ್ಲ ಅರ್ಬನ್ ಹೆಲ್ತ್ ಸೆಂಟರ್, ಜಿಲ್ಲೆಯಲ್ಲಿ ರೂರಲ್ ಹೆಲ್ತ್ ಸೆಂಟರ್ ಪುನರುಜ್ಜೀವನಗೊಳಿಸಿದಲ್ಲದೆ, ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರಗಲ್ಲಿ, ತಾಲೂಕು ಆಸ್ಪತ್ರೆಗಳಲ್ಲಿ ಮಧುಮೇಹ ರೋಗಿಗಳಿಗೆ ಡಯಾಲಿಸಿಸ್ ಸೆಂಟರ್ ಆರಂಭಿಸಿದ್ದು ಖಾದರ್ ಸಮಯದಲ್ಲಿ. ಆದರೆ, ಅದನ್ನು ನಿರ್ವಹಣೆ ಮಾಡುವ ಯೋಗ್ಯತೆ ಬಿಜೆಪಿ ಸರಕಾರಕ್ಕೆ ಇಲ್ಲ. ವೆನ್ಲಾಕ್ ನಲ್ಲಿ 13 ವೆಂಟಿಲೇಟರ್ ಇನ್ನೂ ನಿಗದಿಯಾಗಿಲ್ಲ ಏಕೆ?. ವೆನ್ಲಾಕ್ ಆಸ್ಪತ್ರೆಯಲ್ಲಿ ಮೋರ್ಚರಿಯಲ್ಲಿ ಸರಿಯಾದ ವ್ಯವಸ್ಥೆ ಇರಲಿಲ್ಲ. ಎಲ್ಲ ಕೊರತೆಗಳನ್ನು ನೀಗಿಸಿ ಸಿಟಿ ಸ್ಕ್ಯಾನ್, ಎಂಆರ್ಐ ಸಹಿತ ಹೊಸ ವೈದ್ಯಕೀಯ ಉಪಕರಣಗಳನ್ನು, ಸಲಕರಣೆಗಳನ್ನು ಸುಧಾರಣೆ ಮಾಡಿದ್ದು ಖಾದರ್ ಆರೋಗ್ಯ ಸಚಿವರಾಗಿದ್ದಾಗ. ಮಾಜಿ ಆರೋಗ್ಯ ಸಚಿವರ ತಂದೆ ಮಾಜಿ ಶಾಸಕ ಯು.ಟಿ.ಫರೀದ್ ಹೆಸರಿನಲ್ಲಿ ಅಂಬ್ಯುಲೆನ್ಸ್ ಒಂದನ್ನು ಸರಕಾರಿ ಆಸ್ಪತ್ರೆಗೆ ಒದಗಿಸಲಾಗಿತ್ತು" ಎಂದಿದ್ದಾರೆ.
"ಆಡಳಿತ ವೈಫಲ್ಯ, ವ್ಯಾಕ್ಸಿನ್ ಕೊರತೆ, ನೌಕರರಿಗೆ ಸಂಬಳ ಇಲ್ಲ, ಬೆಡ್ ದಂಧೆ, ವಿದೇಶದಿಂದ ಕಳುಹಿಸಿ ಕೊಟ್ಟ ಆಕ್ಸಿಜನ್ ಟ್ಯಾಂಕರ್ ಅನ್ನು ಬಂದರಿನಲ್ಲಿ ಸ್ವಾಗತಿಸುವುದು, ಮೋದಿ ಸ್ಟಿಕ್ಕರ್ ಹಾಕುವುದು ಇವೆ ಬಿಜೆಪಿಯ ಸಾಧನೆಗಳು" ಎಂದು ಆರೋಪಿಸಿದ್ದಾರೆ.
"ಜಿಲ್ಲಾ ಕಾಂಗ್ರೆಸ್ ವಾರ್ ರೂಂಗೆ ಸುಮಾರು 7000 ಕರೆಗಳು ಬಂದಿದೆ. ಆಂಬ್ಯುಲೆನ್ಸ್ ಬೇಡಿಕೆಗಾಗಿ ಸುಮಾರು 500 ಕರೆಗಳು ಬಂದಿವೆ. ಜಿಲ್ಲೆಯಲ್ಲಿ 13 ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸಿದ್ದೇವೆ. ಜಿಲ್ಲೆಯಲ್ಲಿ ಸುಮಾರು 10000 ಕುಟುಂಬಗಳಿಗೆ ದಿನಸಿ ಕಿಟ್ ಒದಗಿಸಿದ್ದೇವೆ. ಮಂಗಳೂರು ನಗರ, ಬೆಳ್ತಂಗಡಿ, ಉಳ್ಳಾಲ ಕಡೆಗಳಲ್ಲಿ ದಿನಂಪ್ರತಿ ಸುಮಾರು 4000 ಆಹಾರ ಪೊಟ್ಟಣಗಳು, ನೀರು ಬಾಟಲ್ ಗಳನ್ನು ಹಂಚುತ್ತಿದ್ದೇವೆ. ಇದರಲ್ಲಿ ಶಾಸಕರು, ಮಾಜಿ ಶಾಸಕರು, ಪಾರ್ಲಿಮೆಂಟ್ ಅಭ್ಯರ್ಥಿ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ನವರು ಸಹಕರಿಸಿದ್ದಾರೆ" ಎಂದಿದ್ದಾರೆ.
"ಮೂಡುಬಿದಿರೆಯಲ್ಲಿ 3000 ಐಸೊಲೋಷನ್ ಕಿಟ್ ವಿತರಿಸಲಾಗಿದೆ ಮತ್ತು ಮುಂದುವರಿಯುತ್ತಿದೆ. ಸುನಾಮಿ, ಪ್ರವಾಹ ಸಂದರ್ಭ 105 ಮನೆಗಳಿಗೆ ಸ್ವಚ್ಛ ಕುಡಿಯುವ ನೀರಿನ ಕ್ಯಾನ್ ನೀಡಲಾಗಿದೆ. ಕಿಂಡಿ ಅಣೆಕಟ್ಟು( ಕೊಳುವೈಲು ಗ್ರಾಮದಲ್ಲಿ) ದುರಸ್ತಿ 1.00 ಲಕ್ಷದಲ್ಲಿ ಹಲಗೆ. ಮನೆಗಳಿಗೆ ಅಗತ್ಯವಿದ್ದಲ್ಲಿ ಆಕ್ಸಿಜನ್ ಸಿಲಿಂಡರ್ ನೀಡಲಾಗಿದೆ. ಜಿಲ್ಲೆಯಲ್ಲಿ ಕೆಲ ಆಸ್ಪತ್ರೆಗಳಿಗೆ ವಿಟಮಿನ್ ಪ್ಲಸ್ ಝಿನ್ ಮಾತ್ರೆ, ಮಾಸ್ಕ್, ಸ್ಯಾನಿಟೈಜರ್ ನೀಡಿದ್ದೇವೆ. ಮಂಗಳೂರು 4 ಕಡೆ 2000 ಜನರಿಗೆ ಉಚಿತ ಲಸಿಕೆ ನೀಡಿದ್ದೇವೆ. ಕೊರೊನಾ ಜಾಗೃತಿ ಶಿಬಿರ ಏರ್ಪಡಿಸಿದ್ದೇವೆ. ಅನೇಕ ಕುಟುಂಬ ನಿರಾಕರಿಸಿದ ಹಾಗೂ ಅಶಕ್ತ ಕುಟುಂಬಗಳ ಶವ ಸಂಸ್ಕಾರ ನಮ್ಮ ಕಾರ್ಯಕರ್ತರು ಜಾತಿ ಬೇಧವಿಲ್ಲದೆ ಆಯಾಯ ಧರ್ಮದ ಪ್ರಕಾರ ನೆರವೇರಿಸಿದ್ದೇವೆ. ಅನೇಕರಿಗೆ ಆಸ್ಪತ್ರೆ ಹಣ ಪಾವತಿಗಾಗಿ ಸಹಕರಿಸಿದ್ದೇವೆ" ಎಂದು ತಿಳಿಸಿದ್ದಾರೆ.
"ಜಿಲ್ಲೆಯಲ್ಲಿ 7 ಕಡೆಗಳಲ್ಲಿ ರಕ್ತದಾನ ಶಿಬಿರ ಏರ್ಪಡಿಸಿದ್ದೇವೆ. ಯುವ ಕಾಂಗ್ರೆಸ್ನಿಂದ 92 ಯುನಿಟ್, ಬೆಳ್ತಂಗಡಿ ದಾಖಲೆಯ 226 ಯುನಿಟ್, ಮಿಥುನ್ ನೇತೃತ್ವದಲ್ಲಿ 103 ಯುನಿಟ್, ಸಿಟಿ ಬ್ಲಾಕ್ ವತಿಯಿಂದ 95 ಯುನಿಟ್, ಐವನ್ ನೇತೃತ್ವದಲ್ಲಿ 63 ಯುನಿಟ್, ಉಳ್ಳಾದಲ್ಲಿ 38 ಹಾಗೂ ಪುತ್ತೂರಿನಲ್ಲಿ 52 ಯುನಿಟ್ ಸಂಗ್ರಹ ಮಾಡಿದ್ದೇವೆ" ಎಂದಿದ್ದಾರೆ.
"ಮಂಗಳೂರು ನಗರ ಕ್ಷೇತ್ರದಲ್ಲಿ 7 ಕೊರೊನಾ ಕೇರ್ ಸೆಂಟರ್ (70 ಬೆಡ್) ಜವಾಬ್ದಾರಿಯುತ ವಿರೋಧ ಪಕ್ಷವಾಗಿ, ಮಾನವೀಯ ನೆಲೆಯಲ್ಲಿ ಮಾಡಬೇಕಾದ ಎಲ್ಲಾ ಕೆಲಸಗಳನ್ನು ಪ್ರಾಮಾಣಿಕವಾಗಿ, ನಿಸ್ವಾರ್ಥವಾಗಿ ಮಾಡಿದ್ದೇವೆ" ಎಂದು ತಿಳಿಸಿದ್ದಾರೆ.