ಮಂಗಳೂರು, ಮೇ 28 (DaijiworldNews/MS): ಕಿಡ್ನಾಪ್ ಮಾಡಿ ಚಿನ್ನ ದರೋಡೆ ಹಾಗೂ ಇದೇ ಘಟನೆ ಸಂಬಂಧಿಸಿದಂತೆ ಕೊಲೆಗೆ ಸುಪಾರಿ ನೀಡಿದ ಜಟಿಲ ಹಾಗೂ ಅಷ್ಟೇ ಕುತೂಹಲಕಾರಿಯಾದ ಎರಡು ಪ್ರಕರಣಗಳನ್ನು ಮಂಗಳೂರು ಸಿಸಿಐ ಪೊಲೀಸರು ಮತ್ತು ಮೂಡುಬಿದಿರೆ ಪೊಲೀಸರು ಚಾಣಕ್ಷ್ಯತನದಿಂದ ಬೇಧಿಸಿದ್ದು, ಹನ್ನೊಂದು ಜನರನ್ನು ಬಂಧಿಸಿದ್ದಾರೆ.
ದರೋಡೆ ಪ್ರಕರಣದಲ್ಲಿ ಬಂಧಿತರಾದವರನ್ನು ಮೂಡುಬಿದಿರೆಯ ಬೆಳುವಾಯಿಯ ಮೊಹಮ್ಮದ್ ಮಹಜ್ (20) ಹಾಗೂ ಕಾಸರಗೋಡಿನ ಉಪ್ಪಳ ಮನಿಮುಂಡದ ಮೊಹಮ್ಮದ್ ಆದಿಲ್ (25), ಎಂದು ಗುರುತಿಸಲಾಗಿದೆ. ಇವರು ಉಪ್ಪಳದ ಕುಖ್ಯಾತ ಕ್ರಿಮಿನಲ್ ದಿವಂಗತ ಕಾಲಯಾ ರಫೀಕ್ ಎಂಬಾತನ ಮಗನಾದ ಕಾಲಯಾ ಸುಹೈಲ್ ಗ್ಯಾಂಗ್ನ ಸಹಚರರಾಗಿದ್ದಾರೆ.
ಸುಪಾರಿ ಪಡೆದು ಕೊಲೆಗೆ ಹೊಂಚು ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರದ ಶೋಕೂರು ಜೋಕಟ್ಟೆಯ ರೌಡಿಶೀಟರ್ ಅಬ್ದುಲ್ ಸಲಾಂ ಅಲಿಯಾಸ್ ಪಟೌದಿ ಸಲಾಂ(34), (ಈತನ ವಿರುದ್ದ ವಿವಿಧ ಠಾಣೆಯಲ್ಲಿ 10 ಪ್ರಕರಣ ದಾಖಲಾಗಿದೆ ) ಮೊಹಮ್ಮದ್ ಶಾರೂಕ್ (26) ಬೆಂಗಳೂರಿನ ಹೆಹೆಚ್ಐಸಿಎಸ್ ಲೇಔಟ್, ಜೆ ಪಿ ನಗರದ ಸೈಯದ್ ಹೈದರಾಲ(29), ಯಲಚ್ಚಿನಹಳ್ಳಿ, ಜೆ ಪಿ ನಗರ ಅಸೀಫ್ (28), ಮುಂಬೈನ ಅಂಬೇಡ್ಕರ್ ಸ್ಟೀಟ್, ಬಂದರ್, ಅಬ್ದುಲ್ಲಾ ಶೇಖ್(22), ಕಾಂಬೇಕರ್ ಸ್ಟೀಟ್ ಶಾಲಾಸ್ ಹುಸೈನ್(49), ಥಾರಾ ಜಿಲ್ಲೆ ಭೀವಂಡಿಯ ಮುಶಾಹಿದ್ ಅನ್ಸಾರಿ(38) ಕಾಂಬೇಕರ್ ಸ್ಟ್ರೀಟ್ ನ ಶೇಖ್ ಸಾಜಿದ್ ಹುಸೈನ್(49), ಕಾಂಬೇಕರ್ ಸ್ಟೀಟ್, ಮೊಹಮ್ಮದ್ ಆಲ ರೋಡ್ನ ಮುಸ್ತಾಕ್ ಖುರೇಷಿ(42) ಎಂಬವರನ್ನು ಬಂಧಿಸಲಾಗಿದೆ.
ಘಟನೆಯ ವಿವರ:
ಮೂಡುಬಿದಿರೆ ಮೂಲದ ನಿವಾಸಿ ವಕಾರ್ ಯೂನುಸ್ ವ್ಯಕ್ತಿ ಕೈಗೆ ಮೇ ತಿಂಗಳ ಮೊದಲ ವಾರದಲ್ಲಿ ಮುಂಬೈಯ ರೆಹಮಾನ್ ಶೇಖ್ ಎಂಬಾತ ಆತನ ಸಂಬಂಧಿ ಬೆಂಗಳೂರಿನ ಹೈದರಾಲನಿಗೆ ನೀಡುವಂತೆ 440 ಗ್ರಾಂ ಚಿನ್ನದ ಪಾರ್ಸೆಲ್ ಒಂದನ್ನು ನೀಡಿರುತ್ತಾನೆ.
ಆದರೆ ಪಾರ್ಸೆಲ್ ಬಗ್ಗೆ ತಿಳಿದುಕೊಂಡ ವಕಾರ್ ಯೂನುಸ್ ಸ್ನೇಹಿತ ಮೂಡುಬಿದಿರೆ ಬೆಳುವಾಯಿ ನಿವಾಸಿ ಮಹಝ್ ಆತನಿಂದ ಚಿನ್ನ ದರೋಡೆಗೆ ಹೊಂಚು ಹಾಕಿದ್ದಾನೆ. ಹೀಗಾಗಿ ಬೆಂಗಳೂರಿನಿಂದ ಕಾರಿನಲ್ಲಿ ವಕಾರ್ ಯೂನುಸ್ನು ತನ್ನ ಮನೆಗೆ ಹೋಗುತ್ತಿದ್ದಾಗ ಮೂಡುಬಿದಿರೆಯ ಮೊಗರು ಎಂಬಲ್ಲಿ ಭೇಟಿಯಾದ ಮಹಝ್ ಹಾಗೂ ಉಪ್ಪಳದ ಅದಿಲ್ 440 ಗ್ರಾಂ ಚಿನ್ನವನ್ನು ದರೋಡೆ ಮಾಡಿ ವಕಾರ್ ಯೂನುಸ್ ಅಪಹರಣ ಮಾಡಿ ಕಾಸರಗೋಡಿನ ಉಪ್ಪಳದಲ್ಲಿ ಬಿಟ್ಟು ಹೋಗಿದ್ದಾರೆ.
ಇನ್ನೊಂದೆಡೆ ಚಿನ್ನದ ಪಾರ್ಸೆಲ್ ಬೆಂಗಳೂರಿಗೆ ಹೈದರಾಲನಿಗೆ ತಲುಪದೆ ಇದ್ದಾಗ ಆತ ಹಾಗೂ ಆತನ ಸಂಬಂಧಿ ಪಾರ್ಸೆಲ್ ನೀಡಿದಾತ ಮುಂಬೈನ ರೆಹಮಾನ್ ಶೇಖ್ ಇಬ್ಬರೂ ವಕಾರ್ನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಚಿನ್ನ ದರೋಡೆಯಾದ ವಿಚಾರ ಬಾಯ್ಬಿಟ್ಟಿದ್ದಾನೆ. "ತಮ್ಮ ಚಿನ್ನವನ್ನು ವಾಪಾಸು ನೀಡುವಂತೆ ಇಲ್ಲದಿದ್ದಲ್ಲ. ಸುಮ್ಮನೇ ಬಿಡುವುದಿಲ್ಲವೆಂದು" ರಹಮಾನ್ ಶೇಖ್ ಹಾಗೂ ಪಣಂಬೂರಿನ ರೌಡಿಶೀಟರ್ ಪದ್ದೋಡಿ ಸಲಾಂ ಬೆದರಿಕೆ ಕರೆಗಳು ಬರತೊಡಗಿದಾಗ ವಕಾರ್ ಮೂಡುಬಿದಿರೆ ಠಾಣೆಯಲ್ಲಿ ಮೇ. 21 ರಂದು ಚಿನ್ನ ದರೋಡೆ ಹಾಗೂ ಬೆದರಿಕೆಯ ಬಗ್ಗೆ ದೂರು ನೀಡುತ್ತಾನೆ.
ಈ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಇಂಟೆಲಿಜೆನ್ಸ್ ಮೂಲಕ ವಕೂರ್ ಯೂನುಸ್ ಹಾಗೂ ಆರೋಪಿ ಮಹಝ್ ನಿಂದ ಚಿನ್ನ ವಸೂಲಿ ಮಾಡಲು ಹಾಗೂ ಚಿನ್ನ ದೊರಕದಿದ್ದರೆ ಕೊಲೆ ಮಾಡಲು 5 ಲಕ್ಷ ಸುಪಾರಿ ನೀಡಿದ ಮಾಹಿತಿ ದೊರಕಿದೆ.
ಚಿನ್ನ ಪರ್ಸೆಲ್ ನೀಡಿದ್ದ ಮುಂಬೈಯ ಅಬ್ದುಲ್ ರೆಹಮಾನ್ ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯ ರೌಡಿ ಶೀಟರ್ ಆಗಿರುವ ಅಬ್ದುಲ್ ಸಲಾಂ ಅಲಿಯಾಸ್ ಪಟ್ಟೋಡಿ ಸಲಾಂ ಎಂಬಾತನಿಗೆ ಕದ್ದು ಹೋದ ಚಿನ್ನವನ್ನು ವಸೂಲಿ ಮಾಡಿಕೊಡುವಂತೆ 5 ಲಕ್ಷ ರೂಪಾಯಿಗಳಿಗೆ ಸುಪಾರಿ ನೀಡಿದ್ದ. ಹೀಗಾಗಿ ರೌಡಿ ಶೀಟರ್ ಪಟ್ಟೋಡಿ ಸಲಾಂ ತನ್ನ ತಮ್ಮನೊಂದಿಗೆ ಹಾಗೂ ಮುಂಬೈಯಿಂದ ಬಂದ ರಹಮಾನ್ ಶೇಖ್ನ ತಮ್ಮ ಅಬ್ದುಲ್ ಶೇಖ್ ಸೇರಿದಂತೆ 4 ಜನ ರೌಡಿಗಳು ಹಾಗೂ ಬೆಂಗಳೂರಿನಿಂದ ಬಂದ ಪಾರ್ಸಲ್ ಮುಖಾಂತರ ಚಿನ್ನವನ್ನು ಪಡೆದುಕೊಳ್ಳಬೇಕಾದ ಹೈದರಾಲ ಸೇರಿದಂತೆ 3 ಜನ ಜೊತೆಗೂಡಿಕೊಂಡು ಮಾರಾಕಾಸ್ತ್ರಗಳೊಂದಿಗೆ ಇನ್ನೋವಾ ವಾಹನ ಮತ್ತು ಮಾರುತಿ ಸ್ವಿಪ್ಟ್ ಕಾರಿನಲ್ಲಿ ಮೂಡುಬಿದಿರೆಯ ಬೆಳುವಾಯಿಯ ಮಹಝ್ ಮನೆಯ ಬಳಿ ಸ್ವಲ್ಪ ದೂರದಲ್ಲಿ ಹೊಂಚು ಹಾಕಿ ಕಾಯುತ್ತಿದ್ದರು.
ಈ ವೇಳೆ ದಾಳಿ ನಡೆಸಿದ ಸಿಸಿವಿ ಪೊಲೀಸರು, ಆರೋಪಿಗಳನ್ನು ಬಂಧಿಸಿ, ಮಾರುತಿ ಸ್ವಿಫ್ಟ್ ಕಾರು, ಇನ್ನೋವಾ ಕಾರು, ತಲವಾರುಗಳು, 10 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಮೂಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂಡಬಿದ್ರಿ ಪೊಲೀಸರು ಸದ್ರಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿದ್ದಾರೆ.
"ಚಿನ್ನದ ವ್ಯವಹಾರದ ಹಿಂದಿನ ಅಸಲಿಯತ್ತು ಏನು ಎಂಬುವುದು ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಾಗಿದೆ" ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಈ ಎರಡು ಪ್ರಕರಣಗಳನ್ನು ಡಿಸಿಪಿ ಹರಿರಾ ಶಂಕರ್ ಐ.ಪಿ.ಎಸ್ ಹಾಗೂ ಅಪರಾಧ & ಸಂಚಾರ ವಿಭಾಗದ ಡಿಸಿಪಿಯವರಾದ ವಿನಯ್ ಎ. ಗಾಂವ್ಕರ್, ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಎಸ್ ಮಹೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಐ ಘಟಕದ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐ ರಾಜೇಂದ್ರ ಬಿ ಮತ್ತು ಸಿಬ್ಬಂದಿಗಳು ಮೂಡುಬಿದಿರೆ ಪೊಲೀಸ್ ಠಾಣಾ ಪಿಎಸ್ಐ ಸುದೀಪ್ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿದ್ದು ತನಿಖೆ ಮುಂದುವರೆದಿರುತ್ತದೆ.