ಕಾರ್ಕಳ, ಮೇ.28 (DaijiworldNews/HR): ಕೊರೊನಾದ ಸಮಯದಲ್ಲಿಯೂ ಅಭಿವೃದ್ಧಿಯ ಹೆಸರಿನಲ್ಲಿ ಅವ್ಯಾಹತವಾಗಿ ಕಮಿಷನ್ ದಂಧೆಯು ಅವಿಭಜಿತ ಕಾರ್ಕಳ ತಾಲೂಕಿನಲ್ಲಿ ನಡೆಸಲಾಗುತ್ತಿದೆ. ಇಂತಹ ಅವೈಜ್ಞಾನಿಕ ಕಾಮಗಾರಿ ಸ್ಥಗಿತಗೊಳಿಸದೇ ಹೋದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ" ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.
ಕಾರ್ಕಳ ಕಾಂಗ್ರೆಸ್ ಬ್ಲಾಕ್ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಣ್ಣೆಹೊಳೆ ಏತ ನೀರಾವರಿ ಯೋಜನೆ ಸಂಪೂರ್ಣ ಅವೈಜ್ಞಾನಿಕದಿಂದ ಕೂಡಿದಾಗಿದ್ದು, ಅಕಾಲಿಕ ಮಳೆಯಿಂದಾಗಿ ನೆರೆಯ ಬೀತಿ ಎದುರಾಗಿದ್ದು, ಮಳೆಗಾಲದ ವೇಳೆಗೆ ಆ ಭಾಗದಲ್ಲಿ ಕೃತಕ ನೆರೆ ಎದುರಾಗಲಿದ್ದು, ಸಂಪದ್ಬರಿತ ಕೃಷಿ ಭೂಮಿ ನೀರು ಪಾಲಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸುವ ಸಾಧ್ಯತೆಯ ಬಗ್ಗೆ ಮಾಹಿತಿ ನೀಡಿದರು.
"ಅವೈಜ್ಞಾನಿಕವಾಗಿ ಜಾರಿಗೊಳಿಸಲು ಉದ್ದೇಶಿಸಿದ ಯೋಜನೆಯಿಂದಾಗಿ ಪರಿಸರದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ತೋಡುಗಳಿಗೆ ಕಟ್ಟಿರುವ ತಡೆಗೋಡೆ ಹಾಗೂ ಚೆಕ್ ಡ್ಯಾಮ್ಗಳಿಂದ ರೈತರ ತೋಟ, ಗದ್ದೆಗಳಿಗೆ ನೀರು ನುಗ್ಗಿ ಹಾನಿಯಾಗುತ್ತಿದೆ. ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ನೆಪದಲ್ಲಿ ಹಲವು ಕಾಮಗಾರಿಗಳು ಕಮಿಷನ್ ದಂಧೆಗಾಗಿ ಮಾರ್ಪಟ್ಟಿದೆ. ಅನಗತ್ಯವಾಗಿ ಆವಶ್ಯವಿಲ್ಲದೆ ಕಡೆಗಳಲ್ಲಿ ಕಿಂಡಿ ಅಣೆಕಟ್ಟು, ಕಾಲು ಸಂಕ ಕಿರು ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಜೀವ ಉಳಿದರೆ ಮತ್ತೆ ಕಾಮಗಾರಿಗಳು ಮಾಡಿಸಿಕೊಳ್ಳಬಹುದು. ಧನದಾಹಕ್ಕೆ ಒಳಗಾಗಿ ಜನರನ್ನು ಬಲಿಕೊಡುವುದು ಬೇಡ. ಸಂಸದರು, ಶಾಸಕರು, ಅಧಿಕಾರಿಗಳು ಮೇಲಿನ ವಿಚಾರಕ್ಕೆ ಸಂಬಂಧಿಸಿದಂತೆ ಗಮನಹರಿಸಬೇಕು" ಎಂದರು.
ಇನ್ನು "ಉಡುಪಿ ಜಿಲ್ಲಾಧಿಕಾರಿ ಜಗದೀಶ್.ಜಿ ಜನಪರವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇವೆ. ಅದೇ ರೀತಿ ಭ್ರಷ್ಟಚಾರ ತಡೆ ಬಗ್ಗೆಯೂ ಡಿಸಿಯವರು ಗಮನಹರಿಸಬೇಕು. ಸಣ್ಣ ವ್ಯಾಪಾರಿಗಳು, ಬಟ್ಟೆ ಅಂಗಡಿಯವರು, ಟೈಲರ್, ಫೊಟೋಗ್ರಾಪರ್ ಹೀಗೆ ಇನ್ನು ಹಲವು ವಲಯದ ಮಂದಿಗೆ ಕೆಲಸಕ್ಕೆ ಅವಕಾಶ ಮಾಡಿಕೊಡಬೇಕು. ವಾಹನ ಸಂಚಾರದಲ್ಲಿ ಸಿಕ್ಕಿಹಾಕಿದವರನ್ನು ರಸ್ತೆಯಲ್ಲಿ ಬಸ್ಕಿ ಹೊಡೆಸುವುದು, ಹಿರಿಯ ನಾಗರಿಕರ ಕೈಯಲ್ಲಿ ಬೈಕು ತಳ್ಳುವಂತೆ ಮಾಡುವುದು, ಲಾಠಿಯಿಂದ ಹೊಡೆಯುವುದು ತಪ್ಪು. ಈ ವರ್ತನೆಗಳು ಬ್ರಿಟಿಷ್ ಆಡಳಿತದ ದಬ್ಬಾಳಿಕೆಗೆ ಹಿಡಿದ ಕೈಗನ್ನಡಿಯಾಗಿದೆ. ನಾಗರಿಕರ ಸಂಕಷ್ಟಕ್ಕೆ ನೆರವಾಗದ ಶಾಸಕರು, ಸಂಸದರ ಮೌನದ ಹಿಂದಿನ ಗುಟ್ಟೇನು? ರಾಮನ ಹೆಸರಿನಲ್ಲಿ ಅಧಿಕಾರ ಬೇಕು ಆತನ ಸಂದೇಶ ಮಾತ್ರ ಬಿಜೆಪಿಗೆ ಬೇಡವಾಗಿರುವುದು ವಿಪರ್ಯಾಸ" ಎಂದು ಹೇಳಿದ್ದಾರೆ.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಬಿಪಿನ್ಚಂದ್ರಪಾಲ್ ನಕ್ರೆ, ಪ್ರಕಾಶ್ ಪೂಜಾರಿ, ದಿನೇಶ್ ಶೆಟ್ಟಿ, ರಾಮಣ್ಣ ಶೆಟ್ಟಿ ಮರ್ಣೆ,ಜಾನ್ ಟೆಲ್ಲೀಶ್, ಉಪಸ್ಥಿತರಿದ್ದರು.