ಸುಳ್ಯ, ಮೇ 28 (DaijiworldNews/MS): ಕೊರೊನಾ ನಿಯಂತ್ರಣಕ್ಕಾಗಿ ಹೇರಲಾಗಿರುವ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಮೈದಾನಗಳಲ್ಲಿ ಯುವಕರು ಕ್ರಿಕೆಟ್, ವಾಲಿಬಾಲ್ ಆಡುತ್ತಿರುವ ಬಗ್ಗೆ ಜಿಲ್ಲೆಯಲ್ಲಿ ಇತ್ತೀಚೆಗೆ ಸಾಕಷ್ಟು ದೂರುಗಳು ಕೇಳಿಬರುತ್ತಿದೆ. ಈ ಬಗ್ಗೆ ಜಿಲ್ಲೆಯಲ್ಲಿ ಈಗಾಗಲೇ ಸಂಬಂಧಪಟ್ಟ ಠಾಣೆಗಳ ಸಿಬ್ಬಂದಿಗಳು ನಿಗಾ ವಹಿಸುವಂತೆ ಸೂಚಿಸಲಾಗಿದೆ.
ಇನ್ನೊಂದೆಡೆ ಕೊರೊನಾ ಬಗ್ಗೆ ಕ್ಯಾರೇ ಅನ್ನದೇ ನಿಯಮ ಉಲ್ಲಂಘಿಸಿ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯುವಕರು ಬಾಲಕರು ಗುಂಪು ಸೇರಿ ಭರ್ಜರಿಯಾಗಿ ಕ್ರಿಕೆಟ್ ಆಟ ಆಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪಿಡಿಓ ದಾಳಿ ನಡೆಸಿ ಆಟಕ್ಕೆ ಬಳಸುತಿದ್ದ ಉಪಕರಣಗಳನ್ನು ಮೇ.೨೭ ರ ಗುರುವಾರ ಸಂಜೆ ವಶಪಡಿಸಿಕೊಂಡಿದ್ದಾರೆ.
ಕೊಲ್ಲಮೊಗ್ರು ಗ್ರಾಮದ ತೋಟದಮಜಲು, ಕಟ್ಟ, ಗಡಿಕಲ್ಲು ಸ್ಥಳದಲ್ಲಿ ಯುವಕರು ಕ್ರಿಕೆಟ್ ಆಟದಲ್ಲಿ ನಿರತರಾಗಿದ್ದಾರೆ. ದಾಳಿ ನಡೆಸಲು ಗ್ರಾ.ಪಂ. ಪಿಡಿಒ ರವಿಚಂದ್ರ ಮತ್ತು ಸಿಬ್ಬಂದಿ ಸಂತೋಷ್ ಸ್ಥಳಕ್ಕೆ ತೆರಳಿದಾಗ ಯುವಕರು ಬ್ಯಾಟ್, ವಿಕೆಟ್, ಬಾಲ್ ಬಿಟ್ಟು ಎದ್ದು ಬಿದ್ದು ಕಾಲ್ಕಿತ್ತಿದ್ದಾರೆ.