ಮಂಗಳೂರು, ಮೇ 28(DaijiworldNews/MS): ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಒಂದೇ ಕಡೆ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳು ಲಭ್ಯವಿದ್ದು, ಭೌತಿಕ ಪರೀಕ್ಷೆ , ಗಂಟಲು ಮಾದರಿ ಪರೀಕ್ಷೆ ನಡೆಸುವುದು ಮತ್ತು ಸ್ಥಳದಲ್ಲಿಯೇ ಸೂಕ್ತ ಚಿಕಿತ್ಸೆ ನೀಡುವುದು ಹಾಗೂ ಅವಶ್ಯಕತೆಯುಳ್ಳವರಿಗೆ ವೈದ್ಯಕೀಯ ಕಿಟ್ ಗಳನ್ನು ವಿತರಿಸುವುದು ಮೊದಲಾದ ಉದ್ದೇಶಗಳಿಗಾಗಿ ಸಂಚಾರಿ ಕ್ಲಿನಿಕ್ ಒಳಗೊಂಡಿರುವ “ವೈದ್ಯರ ನಡೆ, ಹಳ್ಳಿಗಳ ಕಡೆ" ಎಂಬ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ.
ಆರಂಭದಲ್ಲಿ ಸ್ಥಳೀಯ ಆಶಾ ಕಾರ್ಯಕರ್ತೆಯರು ಎನ್ -95 ಮತ್ತು ಇತರ ಪಿಪಿಇ ಸಾಮಗ್ರಿ ಧರಿಸಿ ಗ್ರಾಮದ ಪ್ರತಿಯೊಂದು ಮನೆಗೆ ಭೇಟಿ ನೀಡಿ, ವ್ಯಕ್ತಿಗಳನ್ನು ಸಂದರ್ಶಿಸಿ ಕೋವಿಡ್ -19 ವೈರಾಣು ಲಕ್ಷಣಗಳಿರುವ ಬಗ್ಗೆ ಕಂಡುಬಂದಲ್ಲಿ ಅವರನ್ನು ಸೂಕ್ತ ತಪಾಸಣೆಗೆ ಒಳಪಡಿಸಲು ಸಂಚಾರಿ ಕ್ಲಿನಿಕ್ ತಂಡಕ್ಕೆ ಶಿಫಾರಸ್ಸು ಮಾಡಬೇಕು. ಗ್ರಾಮದ ಪ್ರತಿಯೊಬ್ಬ ನಾಗರಿಕರೂ ಕೋವಿಡ್ -19 ತಪಾಸಣೆಗೆ ಒಳಪಡಲು ಅನುಕೂಲವಾಗುವಂತೆ “ವೈದ್ಯರ ನಡೆ ಹಳ್ಳಿಗಳ ಕಡೆ” ಕಾರ್ಯಕ್ರಮವನ್ನು ಪ್ರಾರಂಭಿಸುವ ಪೂರ್ವದಲ್ಲಿ ಕನಿಷ್ಠ ಎರಡು ದಿನಗಳ ಮುಂಚಿತವಾಗಿ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳು ಈ ಕುರಿತು ಗ್ರಾಮಸ್ಥರಿಗೆ ವ್ಯಾಪಕ ಪ್ರಚಾರ ಮಾಡಬೇಕು . ಮೊಬೈಲ್ ಕ್ಲಿನಿಕ್ ವಾಹನವು ಪ್ರತಿ ದಿನವು 3 ರಿಂದ 4 ಹಳ್ಳಿಗಳಿಗೆ ಭೇಟಿ ನೀಡಿ, ಸ್ಥಳದಲ್ಲಿಯೇ ಕೋವಿಡ್ ತಪಾಸಣೆಯನ್ನು ಕೈಗೊಳ್ಳುವಂತೆ ಗುರಿ ನಿಗಧಿಪಡಿಸಿ, ಮುಂದಿನ ಅವಧಿಯಲ್ಲಿ ಯಾವ ಗ್ರಾಮಕ್ಕೆ ಭೇಟಿ ನೀಡಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕು.
ತಪಾಸಣೆ ಬಳಿಕ ರೋಗಿ ಕೊವೀಡ್ ಕೇರ್ ಸೆಂಟರ್ ನಲ್ಲಿರಬೇಕೇಅಥವಾ ಹೋಂ ಐಷಲೇಶನ್ ನಲ್ಲಿರಬೇಕೇ ಎಂಬ ನಿರ್ಧಾರವನ್ನು ವೈದ್ಯರು ತೆಗೆದುಕೊಳ್ಳುವುದು, ಸೋಂಕಿತರಿಗೆ ಸೂಕ್ತ ಮಾಹಿತಿ ನೀಡಿ ಮೆಡಿಕಲ್ ಕಿಟ್ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. .
ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೋವಿಡ್ ಪರೀಕ್ಷೆ ಮಾಡಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು, ಕೋವಿಡ್ ಸೋಂಕಿನ ಪ್ರಸರಣದ ಸರಪಳಿ ತುಂಡರಿಸುವುದು, ಜನರನ್ನು ಪರೀಕ್ಷೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಉದ್ದೇಶವಾಗಿದೆ.