ಮಂಗಳೂರು, ಮೇ. 27 (DaijiworldNews/HR): ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆ ಕೈಗೊಂಡಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಇಂದು ವೀಕ್ಷಿಸಿದರು.
ಬಳಿಕ ಮಾತನಾಡಿದ ಅವರು, "ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗೆ ಎಲ್ಲಾ ರೀತಿಯ ಕ್ರಮವನ್ನು ವಹಿಸಲಾಗಿದೆ, ಹಾಗೆಯೇ ಎರಡನೇ ಅಲೆ ಹಾಗೂ ಸಂಭವನೆಯ ಮೂರನೇ ಅಲೆ ಬಂದರೂ ಸಮಸ್ಯೆಯಾಗದಂತೆ ಎಲ್ಲಾ ಕೋವಿಡ್ ಸೋಂಕಿತರ ಆರೈಕೆಗಾಗಿ ಜಿಲ್ಲೆಯಲ್ಲಿನ ಆರೋಗ್ಯ ಮೂಲ ಸೌಕರ್ಯವನ್ನು ಹೆಚ್ಚಿಸಿ, ಉತ್ತಮ ಗುಣ ಮಟ್ಟದ ಚಿಕಿತ್ಸೆಯನ್ನು ಒದಗಿಸಲು ಜಿಲ್ಲಾಡಳಿತವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ" ಎಂದರು.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಹೆಚ್ಚಿನ ಜನರು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀರಿಕ್ಷಿಸಿ ಬರುತ್ತಿರುವ ಹಿನ್ನಲೆ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್-19 ಚಿಕಿತ್ಸೆಗಾಗಿ ಗುರುತಿಸಲಾದ ನ್ಯೂ ಮೆಡಿಸಿನ್ ಬ್ಲಾಕ್ನಲ್ಲಿ ಈಗಾಗಲೇ 30 ಬೆಡ್ ಹಾಗೂ 50 ಬೆಡ್ಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ ಕೊರೊನಾ ಸೋಂಕಿತರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಕಲ್ಪಿಸಲು ಐಸಿಯು ಬೆಡ್ ಹಾಗೂ ವೆಂಟಿಲೇಟರ್ಗಳ ಸಾಮಥ್ರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಸುಸಜ್ಜಿತವಾದಂತಹ 32 ವೆಂಟಿಲೇಟರ್ ಒಳಗೊಂಡಂತೆ ಒಟ್ಟು 40 ಐಸಿಯು ಸೌಲಭ್ಯವುಳ್ಳ ಬೆಡ್ಗಳನ್ನು ಅಳವಡಿಸುವ ಕಾಮಗಾರಿಯು 24*7 ಕೈಗೊಂಡಿದ್ದು, ಅದು ಮುಂದಿನ 10 ದಿನಗಳಲ್ಲಿ ಪೂರ್ಣಗೊಳ್ಳುವುದರೊಂದಿಗೆ ಕೋವಿಡ್ ಸೋಂಕಿತರಚಿಕಿತ್ಸೆಗೆ ಅನುಕೂಲವಾಗಲಿದೆ" ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಸಧಾಶಿವ ಶಾನ್ಭೋಗ್, ಆರೋಗ್ಯ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಪುಟ್ಟವೀರ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.