ಉಡುಪಿ, ಮೇ. 27 (DaijiworldNews/HR): "ಒಂದು ಕಡೆ ಇಡೀ ದೇಶದಲ್ಲಿ ಕೊರೊನಾ ತಾಂಡವವಾಡುತ್ತಾ ಮರಣ ಮೃದಂಗ ಬಾರಿಸುತ್ತಿದ್ದರೆ, ಇತ್ತ ರಾಜ್ಯದ ಮುಖ್ಯಮಂತ್ರಿ ಬಡಲಾವಣೆಯಲ್ಲಿ ಬಿಜಪಿಯು ವ್ಯಸ್ತವಾಗಿರುವುದು ನಿಜಕ್ಕೂ ವಿಪರ್ಯಾಸ ವೆನಿಸಿದೆ" ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ದಿನೇ ದಿನೇ ಅನೇಕ ಸಾವುಗಳು ಕೊರೊನಾ ಎರಡನೇ ಅಲೆಯಿಂದಾಗಿ ರಾಜ್ಯದಲ್ಲಿ ಸಂಭವಿಸುತ್ತಿದ್ದರೂ, ಅಸಮರ್ಪಕ ಆಕ್ಸಿಜನ್ ಸರಬರಾಜು ಬೆಡ್ ವ್ಯವಸ್ಥೆ, ವೆಂಟಿಲೇಟರ್ ವ್ಯವಸ್ಥೆ, ವ್ಯಾಕ್ಸಿನ್ ಮತ್ತು ಔಷದಿ ಸರಬರಜಿನಿಂದಾಗಿ ರಾಜ್ಯದ ಜನರು ಪಡುತ್ತಿದ್ದ ಬವಣೆಯನ್ನು ಕಂಡು ತಾಳಲಾರದೆ ಉಚ್ಚ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಮಧ್ಯಪ್ರವೇಶಿಸಿ ಸರ್ಕಾರಕ್ಕೆ ಛೀಮಾರಿ ಹಾಕಿ ಕೂಡಲೇ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರಕ್ಕೆ ಆದೇಶಿಸಿರುವುದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ, ಆದರೂ ತನಗಾದ ಮುಖಭಂಗವನ್ನು ತಪ್ಪಿಸಲು ಉಚ್ಚನ್ಯಾಯಾಲಯದ ಆದೇಶಕ್ಕೆ ವಿರುದ್ದವಾಗಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ಸಲ್ಲಿಸಿದ ಸರ್ಕಾರದ ಮೇಲ್ಮನವಿಗೆ ಹಿನ್ನಡೆಯಾಗಿ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿರುವುದು ತೀವ್ರ ಮುಖಭಂಗ ಅನುಭವಿಸುವಂತಾಗಿತ್ತು" ಎಂದರು.
ಇನ್ನು "ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಬಿಜೆಪಿ ಹೈಕಮಾಂಡ್, ಪಕ್ಷಕ್ಕಾದ ಮುಜುಗರದಿಂದ ತಪ್ಪಸಿಕೊಳ್ಳಲು ಮತ್ತು ಹಾನಿಯಾದ ವರ್ಚಸ್ಸನ್ನು ಸರಿಪಡಿಸುವ ಕಾರಣವನ್ನು ಮುಂದಿಟ್ಟು ಈಗ ಮುಖ್ಯಮಂತ್ರಿ ಬದಲಾವಣೆಗೆ ಹೊರಟಿರುವುದು ಬಿಜೆಪಿಯು ಜನಪರ ಕಾಳಜಿ ಇಲ್ಲದ, ಅಧಿಕಾರ ದಾಹಿ ಪಕ್ಷ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ" ಎಂದು ಹೇಳಿದ್ದಾರೆ.
"ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಲ್ಲೊಬ್ಬರಾದ ಡಿ. ವಿ. ಸದಾನಂದ ಗೌಡರು ಕೇಂದ್ರದಿಂದ ರಾಜ್ಯಕ್ಕೆ ದೊರಕಬೇಕಾದ ಎಲ್ಲಾ ಕೋವಿಡ್ ನಿರ್ವಹಣಾ ಸೌಲಭ್ಯಗಳನ್ನು ಈಗಾಗಲೇ ಒಡಗಿಸಲಾಗಿದ್ದು ತನ್ನ ಜವಾಬ್ದಾರಿಯನ್ನು ನಿಭಾಯಿಸಿದೆ, ಇನ್ನು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ಹೊಣೆಗೇಡಿತನದ ಹೇಳಿಕೆಯನ್ನು ನೀಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ" ಎಂದರು.
"ಕೊರೊನಾ ಎರಡನೇ ಅಲೆಯ ಆರ್ಭಟ ಭೀಕರವಾಗಿ ಮುಂದುವರಿದಿದ್ದು ಸರ್ಕಾರ ಸೋಂಕಿತರ ಮತ್ತು ಮೃತ ಪಟ್ಟವರ ನೈಜ ಅಂಕಿಅಂಶಗಳನ್ನು ಮರೆಮಾಚುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳಿಗೆ ಸಲಹೆ- ಸಹಕಾರವನ್ನು ನೀಡಿ ಹುರಿದುಂಬಿಸಿ ಸರ್ಕಾರ ಮುನ್ನಡೆಸಲು ಬೆಂಬಲಿಸುವ ಬದಲು ಮುಖ್ಯಮಂತ್ರಿ ಯನ್ನು ಬದಲಾಯಿಸಿ ತಮ್ಮ ಆಪ್ತೇಷ್ಠರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಬಿಜೆಪಿ ಯ ಹೈ-ಕಮಾಂಡಿನ ಹುನ್ನಾರ ಅಧಿಕಾರ-ದಾಹದ ಪರಮಾವಧಿಯಾಗಿದೆ" ಎಂದು ಹೇಳಿದ್ದಾರೆ.