ಮಂಗಳೂರು, ಮೇ 27 (DaijiworldNews/MS): ಬೋಟ್ ಎಂಜಿನ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು, ಸಮುದ್ರದಲ್ಲಿ ಸಿಲುಕಿದ್ದ ತಮಿಳುನಾಡಿನ 10 ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಿಸಿದೆ.
ತಮಿಳುನಾಡಿನ ಲಾರ್ಡ್ ಆಫ್ ದಿ ಓಷಿಯನ್ ಬೋಟ್ (ಐಎನ್ಡಿ-ಟಿಎನ್ -15-ಎಂಎಂ -5338) ತೌಕ್ತೇ ಚಂಡಮಾರುತದಿಂದಾಗಿ ಮೇ 14 ರಂದು ಪೋರ ಬಂದರ್ನಲ್ಲಿ ಆಶ್ರಯ ಪಡೆದಿತ್ತು. ಬಳಿಕ ಮೇ 19 ರಂದು ಬಂದರಿನಿಂದ ಹೊರಟಿತ್ತು . ಆದರೆ ಮಂಗಳೂರು ಬಳಿ ಎಂಜಿನ್ ವೈಫಲ್ಯದಿಂದಾಗಿ ಸಮುದ್ರ ಮದ್ಯೆ ಬಾಕಿಯಾಗಿತ್ತು.
ಮಂಗಳೂರು ಸಮೀಪ ಕಡಲ ತೀರದಿಂದ 20 ನಾಟಿಕಲ್ ಮೈಲಿ ದೂರದಲ್ಲಿದ್ದ ಬೋಟ್ ನ ಎಂಜಿನ್ ಫೇಲ್ ಆಗಿತ್ತು . ಮಾಹಿತಿ ಪಡೆದ ಕರಾವಳಿ ಕಾವಲು ಪಡೆ, ಮಂಗಳೂರು ಬಂದರಿನಿಂದ ರಕ್ಷಣಾ ಕಾರ್ಯಾಚರಣೆಗಾಗಿ ಐಸಿಜಿ ರಾಜದೂತ್ ಹಡಗನ್ನು ಸ್ಥಳಕ್ಕೆ ಕಳುಹಿಸಿತ್ತು. ರಾಜದೂತ್ ಹಡಗಿನ ಮೂಲಕ ಸಮುದ್ರದಲ್ಲಿ ಸಿಲುಕಿದ್ದ ಬೋಟ್ ಹಾಗೂ ಅದರಲ್ಲಿದ್ದ 10 ಜನ ಮೀನುಗಾರರನ್ನು ಸುರಕ್ಷಿತವಾಗಿ ದಡಕ್ಕೆ ತರಲಾಗಿದೆ.
ಸದ್ಯ ಮೀನುಗಾರರನ್ನು ಹಾಗೂ ಬೋಟ್ ಅನ್ನು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಕರಾವಳಿ ಕಾವಲು ಪಡೆಯ ಕಮಾಂಡರ್ ವೆಂಕಟೇಶ್ ತಿಳಿಸಿದ್ದಾರೆ.