ಉಡುಪಿ, ಮೇ.27 (DaijiworldNews/PY): "ಸಂತೆಕಟ್ಟೆ ಬಳಿ ಇರುವ ಮಕ್ಕಳ ದತ್ತು ಸ್ವೀಕಾರ ಕೇಂದ್ರ ಕೃಷ್ಣಾನುಗ್ರಹದ 14 ವರ್ಷದೊಳಗಿನ 12 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ" ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, "ದತ್ತು ಸ್ವೀಕಾರ ಕೇಂದ್ರದಲ್ಲಿನ 12 ಮಕ್ಕಳು ಸೇರಿದಂತೆ ಆಶ್ರಮದ ಆಯಾ ಸೇರಿ 9 ಸಿಬ್ಬಂದಿಗಳಿಗೆ ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟ ಎಲ್ಲರನ್ನೂ ಕೃಷ್ಣಾನುಗ್ರಹದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರತಿದಿನ ಎರಡು ದಿನಕ್ಕೆರಡು ಬಾರು ಭೇಟಿ ನೀಡಿ ಮಕ್ಕಳ ತಪಾಸಣೆ ನಡೆಸುತ್ತಿದ್ದಾರೆ. ಈವರೆಗೆ ಯಾರಲ್ಲೂ ಕೂಡಾ ರೋಗದ ಲಕ್ಷಣ ಕಾಣಿಸಿಲ್ಲ" ಎಂದಿದ್ದಾರೆ.
ಕೃಷ್ಣಾನುಗ್ರಹದಲ್ಲಿ ಒಟ್ಟು 29 ಮಂದಿ ಅನಾಥ, ವಿಕಲಚೇತನ ಹಾಗೂ ವಿಶೇಷ ಮಕ್ಕಳಿದ್ದಾರೆ. ಹತ್ತು ಮಂದಿ ಸಿಬ್ಬಂದಿಗಳೂ ಸೇರಿದಂತೆ ಎಲ್ಲರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಕೊರೊನಾ ಪರೀಕ್ಷೆಯ ವರದಿ ಬುಧವಾರ ಬಂದಿದ್ದು, 21 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈಗ ಸಂಪೂರ್ಣ ಕಟ್ಟಡವನ್ನು ಸೀಲ್ಡೌನ್ ಮಾಡಲಾಗಿದೆ.
ನೆಗೆಟಿವ್ ವರದಿ ಬಂದ 17 ಮಕ್ಕಳು ಸೇರಿದಂತೆ 2 ಸಿಬ್ಬಂದಿಗಳಿಗೆ ಧನ್ವಂತರಿ ನರ್ಸಿಂಗ್ ಕಾಲೇಜಿನಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.