ಉಡುಪಿ, ಮೇ 27 (DaijiworldNews/MS): ರೌಡಿ ಶೀಟರ್ ಗಳಿಂದ ಎಸ್ ಐ ಓರ್ವರು ಸನ್ಮಾನ ಮಾಡಿಸಿಕೊಂಡ ಫೋಟೊ ಈಗ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ವೈರಲ್ ಅಗಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ದನದ ವ್ಯಾಪಾರಿ ಹುಸೇನ್ ಜೋಕಟ್ಟೆ ಕೊಲೆ ಪ್ರಕರಣದ ಆರೋಪಿಗಳಿಂದ ಹಿರಿಯಡ್ಕ ಠಾಣೆ ಎಸ್ ಐ ಯವರು ಸನ್ಮಾನಿಸಲ್ಪಟ್ಟಿದ್ದು ಆರೋಪಿಗಳಾಗಿರುವ ಪ್ರಸಾದ್ ಕೊಂಡಾಡಿ ಹಾಗೂ ಉಮೇಶ್ ಶೆಟ್ಟಿ ಅವರು ಎಸ್ ಐ ಅವರನ್ನು ಸನ್ಮಾನಿಸಿದವರಾಗಿದ್ದಾರೆ.
ಇತ್ತೀಚೆಗೆಷ್ಟೇ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಹಿರಿಯಡ್ಕ ಠಾಣೆಯಲ್ಲಿ ಮಾಸ್ಕ್ ಸಾನಿಟೈಸರ್ ವಿತರಣೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಸನ್ಮಾನ ನಡೆದಿತ್ತು ಎನ್ನಲಾಗಿದೆ.
2 ವರ್ಷಗಳ ಹಿಂದೆ ದನದ ವ್ಯಾಪಾರಿಯಾಗಿದ್ದ ಹುಸೇನ್ ಕೋಕಟ್ಟೆ ಅವರನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ನಡೆಸಿತ್ತು, ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ಬಜರಂಗದಳದ ಸದಸ್ಯರು ಮತ್ತು ಕರ್ತವ್ಯ ಲೋಪ ಎಸಗಿದ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಬಂಧಿಸಲಾಗಿತ್ತು.
ಆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳು ಈಗ ಪೊಲೀಸ್ ಅಧಿಕಾರಿಯನ್ನೇ ಸನ್ಮಾನಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ.
" ಪೊಲೀಸರಿಗೆ ಎಲ್ಲಾ ಕಡೆಗಳಲ್ಲಿಯೂ ವಿವಿಧ ಸಂಘಟನೆಯವರು ಮಾಸ್ಕ್ ವಿತರಿಸುತ್ತಾರೆ ಅದೇ ರೀತಿ ಹಿರಿಯಡ್ಕ ಠಾಣೆಗೂ ನೀಡಿದ್ದಾರೆ. ಅವರಲ್ಲಿ ರೌಡಿ ಶೀಟರ್ ಇರುವುದು ಗಮನಕ್ಕೆ ಬಂದಿರಲಿಲ್ಲ. ಅದೇ ರೀತಿ ಠಾಣೆಯಲ್ಲಿ ಯಾವುದೇ ಕಾರ್ಯಕ್ರಮವನ್ನು ಮಾಡಿಲ್ಲ" ಎಂದು ಹೆಚ್ಚುವರಿ ಪೊಲೀಸ್ ಅಧಿಕಾರಿ ಕುಮಾರಚಂದ್ರ ಪ್ರತಿಕ್ರಿಯಿಸಿದ್ದಾರೆ.