ಬಂಟ್ವಾಳ, ಮೇ 26 (DaijiworldNews/SM): ಅಧಿಕಾರಿಗಳು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಜನರ ಆರೋಗ್ಯದ ವಿಚಾರದಲ್ಲಿ ಆಟ ಆಡಬೇಡಿ. ಉದಾಸೀನ ಮಾಡಬೇಡಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳ ಪುರಸಭೆಯ ಅಧಿಕಾರಿಗಳಿಗೆ ಖಡಕ್ ಮಾತುಗಳ ಮೂಲಕ ಹೇಳಿದ್ದಾರೆ.
ಬಂಟ್ವಾಳ ಪುರಸಭೆಯ ಸಭಾಂಗಣದಲ್ಲಿ ಪುರಸಭಾ ವ್ಯಾಪ್ತಿಯ 1 ರಿಂದ 5 ನೇ ವಾರ್ಡ್ ವ್ಯಾಪ್ತಿಯ ಟಾಸ್ಕ್ ಫೋರ್ಸ್ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದು ಕೋವಿಡ್ ಸಂಕಷ್ಟದ ಕಾಲ ಇಂತಹ ಸಮಯದಲ್ಲೂ, ಎಲ್ಲವೂ ನಾನೇ ಮಾಡಿದ್ದು, ನಾನು ಮಾಡಿದ್ದೇ ಸರಿ ಎನ್ನುವ ರೀತಿಯಲ್ಲಿ ಅಧಿಕಾರ ಚಲಾಯಿಸಬೇಡಿ, ಅಧಿಕಾರಿಗಳು-ಜನಪ್ರತಿನಿಧಿಗಳು ಸಮನ್ವಯದಿಂದ ಕೆಲಸ ಮಾಡಬೇಕೆಂದು ಅವರು ಕಿವಿಮಾತು ಹೇಳಿದರು. ಪುರಸಭಾ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಟಾಸ್ಕ್ ಫೋರ್ಸ್ ಸಮಿತಿಯ ಕುರಿತು ಸದಸ್ಯರಿಗೆ ಮಾಹಿತಿ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ವೈಮನಸ್ಸು ಇದ್ದರೂ, ಎಲ್ಲವನ್ನು ಬದಿಗಿಟ್ಟು ಕೆಲಸ ಮಾಡಿ, ಜನರಿಗೋಸ್ಕರ ಕೆಲಸ ಮಾಡಿ ಎಂದರು.
ಪುರಸಭೆಯ ಟಾಸ್ಕ್ ಫೋರ್ಸ್ ಸಮಿತಿಗೆ ಸಂಬಂಧಪಟ್ಟ ವಾರ್ಡ್ ಸದಸ್ಯರೇ ಮುಖ್ಯಸ್ಥರು. ಅದರ ಕಾರ್ಯವೈಖರಿಯ ಬಗ್ಗೆ ಪುರಸಭಾ ಅಧ್ಯಕ್ಷರು ಮೇಲ್ವಿಚಾರಣೆ ಮಾಡಬೇಕು ಎಂದರು.
ಕಷ್ಟಕಾಲದಲ್ಲಿ ಜನರ ಸೇವೆ ಮಾಡುವ ಸಮಯ, ಏನೇ ಇದ್ದರೂ ಬದಿಗಿಟ್ಟು ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಬೇಕು. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ, ಜನಪ್ರತಿನಿಧಿಗಳಿಗೆ ದಾಕ್ಷಿಣ್ಯ ಎನ್ನಿಸಿದರೆ ಅಂತಹ ಸಮಯದಲ್ಲಿ ಅಧಿಕಾರಿಗಳಿಗೆ ಸೂಚಿಸಿ ಎಂದರು.